ಒಮ್ಮೆ ಒಳ್ಳೆಯವರೆನಿಸಿಕೊಂಡದ್ದಕ್ಕೆ
ಜೀವನದುದ್ದ ಗುದ್ದಾಡಿ ಅದನ್ನೇ ನಿಭಾಯಿಸುವ ಗುರಿಯೊಂದಿತ್ತು
`ನಾನು ಒಳ್ಳೆಯವರಿಗೆ ಒಳ್ಳೆಯವಳು,
ಕೆಟ್ಟವರಿಗೆ ಕೆಟ್ಟವಳು' ಅಂತ ಹೇಳಿಬಿಟ್ಟಿದ್ದೇನೆ
ಅದಕ್ಕಾಗಿ ಒಳ್ಳೆಯವಳಾಗುವ ಪದವಿ,
ಒಳ್ಳೆಯವಳು ಅನ್ನಿಸಿಕೊಳ್ಳಬೇಕೆಂಬ ಅನವಶ್ಯಕ ಹೊಣೆ
ಎರಡೂ ನನಗೆ ಸಿಕ್ಕಿಲ್ಲ :-)
ಚಕ್ಕಡಿ ಓಡಿಸುವವನು ಬಿಟ್ಟುಹೋಗುವುದಿಲ್ಲ
ಮುಂದೆ ಕಟ್ಟಿರುವ ಚಕ್ಕಡಿ ಎಳೆಯುವ ಜೀವಕ್ಕೂ
ನಾನೆಂದರೆ ಇಷ್ಟ
ಕಥೆ ಹೇಳುತ್ತ ಸಾರಥ್ಯ ಮಾಡಿದ ಕಳ್ಳಕೃಷ್ಣ ನೆನಪಾಗುತ್ತಿದ್ದಾನೆ
ಕಥೆ ಕೇಳಿದ ದ್ರೋಣರ ಶಿಷ್ಯ ಅರ್ಜುನನೂ
ಕನಸಲ್ಲಿ ಬಂದ ಏಕಲವ್ಯ
ಪಾಠ ಕಲಿಯುವ ಬಗೆಯನ್ನು ಅರುಹಿಹೋಗಿದ್ದಾನೆ
ಎಲ್ಲಿ ನಿಂತರೂ ಮುನ್ನಡೆಯುವುದನ್ನೂ
ಎಲ್ಲರನ್ನೂ ಪ್ರೀತಿಸಿ, ವಂದಿಸಿ
ವಹಿಸಿಕೊಂಡ ಜವಾಬ್ಧಾರಿ ಮುಗಿಸಿ ಬಂದಾಗಿದೆ
ಊರಬಾಗಿಲು ತೆರೆದಿದೆ
ಈಗಿನ್ನು ಉಳಿದಿರುವುದು ಅವರ ಪ್ರೀತಿ, ವಂದನೆ
ಸಿಕ್ಕ ತಕ್ಷಣವೇ ಮರಳಿಸಿಬಿಡುವುದು :-)