October 10, 2007

ಬೊಗಸೆಯೊಳು ಭಾವ

ನೆನಪ ಹಂದರಕೆ ಮೌನ ಹೊದಿಕೆ
ಬೊಗಸೆ ತುಂಬಾ
ನಿನ್ನಾಳದ ಕನಸ ಬೀಜ
ಉತ್ತುವೆ ಬದುಕ ಬಯಲ
ಬಿತ್ತು ಕನಸಬೀಜಗಳ
ಮೊಳಕೆಯೊಡೆಯಲಿ ಕನಸು
ನನಸ ಗಿಡವಾಗಿ

ಕನಸ ಸಸಿಗಳ ಸುತ್ತಿ ನಿನ್ನಭಯದ ಬೇಲಿ
ಕಾಯ್ದುಕೋ ಪ್ರೀತಿಯೇ ಬದುಕ ಬಯಲನ್ನು!


ಜನಮನದ ಜಂಗುಳಿಯು
ಜೀವಕಣಗಳ ರಾಶಿ
ಜಗದ ಕಡಲೊಳವು
ಕಣವೆರಡೆಯೇನು ತೆರೆ ತೆಕ್ಕೆಯಲ್ಲಿ
ಒಡಲೊಳಗೆ ನಾನು ಆ ದಡವೆ ನೀನು
ಸುಳಿ ಹಾದಿಯಲಿ ತೇಲಿ ನಮ್ಮ ನೌಕೆ!
ಸಾಗಿಸಲು ನಾವಿಕನೇ ಎದೆಯು ಇಹುದೇ?
ತೆರೆ ಬಾರೆ ರೋಷದಲಿ
ಕನಸು ತೆರೆಯಲಿ ಬಿತ್ತಿ
ತೇಲುವುದ ಸಹಿಪ ಚಿತ್ತವೇ
ನಿನಗೊಂದು ಮನಸು ಇದೆಯೇ
ಕನಸು ಕರಗುವ ಕೊನೆಗೆ
ಮಣಿವ ಮನಸಿಗು ಮುನ್ನ
ತೆರೆಯು ತೇಲುವ ತಾಣಕೆ
ಸಾಗಿಸು ಸಹನೆಯೇ ಸಹನೆಯಿದೆಯೆ?

October 9, 2007

ನಿಮ್ಮಲ್ಲಿ ಮತ್ತಷ್ಟು.....

ಸಧ್ಯಕ್ಕೆ ಲಭ್ಯವಿದ್ದ ಆ ದಿನಗಳಲ್ಲಿ ಬರೆದವುಗಳನ್ನು ಮುಚ್ಚುಮರೆಯಿಲ್ಲದೆ ನಿಮ್ಮೆದುರಿಗೆ ತೆರೆದಿಟ್ಟಿದ್ದಾಯ್ತು. ಕಾಲೇಜಿನ ದಿನಗಳಲ್ಲಿ ಬರೆದ ಇನ್ನು ಕೆಲವು ನನ್ನ ಕೈಗೂ ಸಿಗಲಾರದಷ್ಟು ದೂರದಲ್ಲಿದ್ದುದರಿಂದ ನೀವೆಲ್ಲ ಅದನ್ನು ಓದುವ ಸಮಸ್ಯೆಯಿಂದ ಪಾರಾಗಿದ್ದೀರ.
ಇನ್ನು ಮುಂದೆ 2007ರ ನಂತರ ಬರೆದವುಗಳನ್ನು ಬ್ಲಾಗಲ್ಲಿ ತುಂಬುವ ಕಾರ್ಯ ಶುರುವಾಗಲಿದೆ.

‘ಕೊನೆಕೊಯ್ಲು’ಇದನ್ನು" HAVYAKA ASSOCIATION OF AMERICA" ನವರು '2007 SOUVENIR'ನಲ್ಲಿ ಪಬ್ಲಿಶ್ ಮಾಡುವ ಮೊದಲು ನನ್ನ ಹದಿಹರೆಯದ ತೊದಲು ನುಡಿಗಳ ಬರಹಗಳಲ್ಲಿ ಕೆಲವು ಶಿರಸಿಯ "ಧ್ಯೇಯನಿಷ್ಠ ಪತ್ರಕರ್ತ"ದ ಪುಟಗಳಲ್ಲಿ ಕಾಣಿಸಿಕೊಂಡಿದ್ದವು ಎಂಬುದನ್ನು ಬಿಟ್ಟರೆ ಉಳಿದವುಗಳನ್ನು ಬಹಿರಂಗಗೊಳಿಸುವ ಯತ್ನವನ್ನೇ ನಾನು ಮಾಡಿರಲಿಲ್ಲ.I would like to thank Souvenir of HAA and ಧ್ಯೇಯನಿಷ್ಠ ಪತ್ರಕರ್ತ.

ಬ್ಲಾಗ್ ಬರೆಯಲು ಸ್ಫೂರ್ತಿ ನೀಡುವಂತಹ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ ಎಲ್ಲರಿಗೆ,
ಓದಿದಾಗ ‘ನಾನೂ ಬರೆಯಬೇಕು’ ಎಂಬ ಹುಮ್ಮಸ್ಸು ಕೊಡುವ "ಬರಹ ಬೃಂದಾವನ"ದಲ್ಲಿರುವಂತಹ ಬ್ಲಾಗುಗಳಿಗೆ,
ಹಂಚಿಕೊಳ್ಳುತ್ತಿರುವ ಎಲ್ಲಾ ಓದುಗ ಮಿತ್ರರಿಗೆ ಈ ಬ್ಲಾಗನ್ನು ಸಮರ್ಪಿಸುತ್ತಿದ್ದೇನೆ.
ನಿಮ್ಮೆಲ್ಲರಿಗೆ ಧನ್ಯವಾದ ಅರ್ಪಿಸುತ್ತಾ...

-ಶಾಂತಲಾ ಹೆಗಡೆ.

October 3, 2007

ನಿಮ್ಮೊಳಗೊಂದಿಷ್ಟು.........

ಹೀಗೇ ಸಮಯ ಸಿಕ್ಕಾಗ ಕುಳಿತು ಉತ್ಸಾಹಿ ಬರಹಗಾರ-ಬರಹಗಾರ್ತಿಯರ ಬ್ಲಾಗ್ಸ್ ಓದಿ ಖುಷಿ ಪಡುವಾಗೆಲ್ಲಾ ಅನಿಸಿದ್ದು ನಾನೂ ಕೂಡ ಒಂದು ಬ್ಲಾಗ್ ಕ್ರಿಯೇಟ್ ಮಾಡಿ ನನ್ನ ಬರಹಗಳನ್ನು ಅನ್ನುವುದಕ್ಕಿಂತ, ನಾನು ಗೀಚಿದ್ದನ್ನ ಅದರಲ್ಲಿ ಸುರುವಬೇಕೆಂದು. ಅದಕ್ಕೆ ಮುಹೂರ್ಥ ಸಿಕ್ಕಿದ್ದು ನಿನ್ನೆ ಸಂಜೆ.

ಮೊದಲಿಗೆ ನನ್ನ ಹದಿಹರೆಯದಲ್ಲಿ ಬರೆದ ಅ ಆ ಇ ಈ ಗಳಿಂದ ಪ್ರಾರಂಭಿಸುತ್ತಿದ್ದೇನೆ. ಅವುಗಳೆಲ್ಲಾ ನನ್ನ ಪ್ರಕಾರ ಕವನಗಳು ಎನಿಸಿಕೊಂಡಿದ್ದಂತಹವುಗಳು. ನೀವು ಅವುಗಳನ್ನೋದಿ ಏನೆನ್ನುತ್ತೀರೋ ಗೊತ್ತಿಲ್ಲಾ.....
ಎಷ್ಟೋ ಸಲ ಅವುಗಳನ್ನೋದಿ ನಾನೇ ನನ್ನಳೊಗೆ ನಕ್ಕಿದ್ದಿದೆ. ನಿಮಗೂ ನಗು ಬಂದರೆ ನಕ್ಕು ಬಿಡಿ..... ಈ ರೀತಿಯಲ್ಲಾದರೂ ನಿಮ್ಮನ್ನೆಲ್ಲಾ ನಗಿಸಿದ್ದೇನಲ್ಲಾ ಎಂಬ ಖುಷಿ ನನ್ನ ಪಾಲಿಗಿರಲಿ. ಏಕೆಂದರೆ ನನ್ನ ಕವನಗಳು ‘ಕವನಗಳು’ ಅನ್ನಿಸಿಕೊಳ್ಳುವುದಕ್ಕಿಂತ ‘ಶೈಲಿಯಿರದ ಶಬ್ದಗಳ ಸರ’ ಎನ್ನುವ ಹಾಗಿವೆ.
ಮದುವೆ, ಮನದಿನಿಯ, ಮನೆ, ಮಗ ಇವೆಲ್ಲವನ್ನೂ ಒಟ್ಟಿಗೆ ನಿಭಾಯಿಸುವ ಭರದಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿತ್ತೋ, ಇಲ್ಲಾ ಕಳೆದುಕೊಂಡಿದ್ದೆನೋ ಗೊತ್ತಿಲ್ಲಾ.

ಮತ್ತೆ ಮೊದಲಿಗೆ ಮರಳುವ ಮನಸ್ಸಾಗಿದೆ. ಅರಿಯದೇ ಅರಳುವ ಅಕ್ಷರಗಳಿಗೆ ಅರ್ಥವಿಡುವ ಅಳಿಲು ಯತ್ನ ಮಾಡುತ್ತಿದ್ದೇನೆ.
ಸಹೃದಯಿಗಳ ಸಲಹೆಗಳಿಗೆ ಸದಾ ಸ್ವಾಗತ. ‍

- ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.