July 17, 2008

ಬತ್ತಿದ ಬೆಳದಿಂಗಳು ಹರವಿಕೊಳದು

ಪ್ರೀತಿಯ ನೀವುಗಳೆ....


ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"



ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"


ನಿಮ್ಮೆಲ್ಲರ
-ಶಾಂತಲಾ ಭಂಡಿ.

July 14, 2008

ಮೂಡಲ ಮನೆಯ ಮುತ್ತಿನ ನೀರಿನ ನೆನಪು

ಪದವಿಯ ಮೊದಲವರ್ಷದಲ್ಲಿದ್ದಾಗ ಕಾಲೇಜಿನ ವಾರ್ಷಿಕ ಸಂಚಿಕೆಗಾಗಿ ಬರೆದ ಲೇಖನವೊಂದು ಸಿಕ್ಕಿತು. ಆ ದಿನಗಳ ನೆನಪುಗಳು ಕೊಡುವ ಖುಷಿಯೇ ಬೇರೆ. ಆ ನೆನಪುಗಳೇ ಸಾಕು ದಿನ ಸಂಪೂರ್ಣವಾಗಲು. ಅದರಲ್ಲೂ ಡಾ. ದ ರಾ ಬೇಂದ್ರೆಯಂತವರ ನೆನಪಿನಲ್ಲಿ ತೇಲುತ್ತಿರುವಾಗ ನಿಮ್ಮೆಲ್ಲರ ನೆನಪು. ನೆನಪಿನ ದೋಣಿಯಲ್ಲಿ ನಿಮ್ಮೆಲ್ಲರೊಂದಿಗೆ ವಿಹರಿಸುವ ಖುಷಿಯೇ ಬೇರೆ ಎನಿಸಿತು. ಬೇಂದ್ರೆಯವರ ‘ಸಖಿಗೀತ’ ಓದಿ ಆ ದಿನಗಳಲ್ಲಿ ನನಗನಿಸಿದ ನನ್ನೊಳಗಿನ ಭಾವಗಳ ತುಣುಕುಗಳಿವು ಅಂತ ಮಾತ್ರ ಹೇಳಬಲ್ಲೆ. ವಿಮರ್ಶೆಯಂತೂ ಅಲ್ಲವೇ ಅಲ್ಲ. ಮುದುಡಿ ಮೂಲೆಯಲ್ಲಿದ್ದ ಹಳೆಯ ಹಾಳೆಗಳ ನಿಮಗಾಗಿ ತೆರೆದಿಟ್ಟೆ. ಒಂದಿಷ್ಟು ಧೂಳನ್ನೆಲ್ಲ ಕೊಡವಿ ಹಳೆಯ ಪುಟಗಳಿಗೆ ಹೊಳಪು ಕೊಡುವ ನಿಮ್ಮೆಲ್ಲರಿಗಾಗಿ ಈ ಪುಟಗಳು. ಓದಬೇಕೆನ್ನಿಸಿದರೆ ಪ್ರತಿ ಪುಟದ ಮೇಲೂ ಕ್ಲಿಕ್ಕಿಸುವ ಕಷ್ಟವನ್ನು ನಿಮಗೇ ಬಿಟ್ಟಿದ್ದೇನೆ. ಇನ್ನು ನೀವುಂಟು, ನನ್ನ ಹಳೆಯ ಪುಟವುಂಟು.


‘ಸಖಿಗೀತ’ ಕ್ಕೆ ಸಂಬಂಧಿಸಿದ ನಿಮ್ಮ ಅನಿಸಿಕೆಗಳನ್ನೂ ಇಲ್ಲಿಷ್ಟು ತೇಲಬಿಡಿ, ನಿಮ್ಮೆಲ್ಲರ ಅನಿಸಿಕೆಗಳಿಲ್ಲಿ ಕಲೆತು ಸಿಹಿಹೂರಣವಾಗಲಿ ಈ ಸಮಯ.

ನನ್ನ ಕಾಲೇಜಿನ ವಾರ್ಷಿಕ ಸಂಚಿಕೆಯ ಮುಖಪುಟ (ಹಾಳೆ ಹಳೆಯದಾದರೇನು ನೆನಪು ನವನವೀನ. ಅಲ್ಲವೇ?:)




ಪುಟ ೧


ಪುಟ೨


ಪುಟ೩


ಪ್ರೀತಿಯಿಂದ,
-ಶಾಂತಲಾ ಭಂಡಿ.

**********************************************************************************************


Harish - ಹರೀಶ said...
ಶಾಂತಲಕ್ಕ, ಎಷ್ಟೋ ಜನಕ್ಕೆ (ಅಲ್ಲಿ ಓದಿದವ್ವೆಯ) ಎಂ.ಎಂ. ಅಂದ್ರೆ ಮೋಟಿನಸರ ಮೆಮೋರಿಯಲ್ ಅಂತ ಗೊತ್ತಿಲ್ಲೆ...

ಯಾರ್ನಾದ್ರೂ ಕೇಳಿ ನೋಡು :-)

July 14, 2008 7:59 PM
xx said...
shanatala avare, nimma bhavanegaLu nijakkoo nammannu yavudo lokakke karedoiuttade. nimma kannada jnaana, padhakosha adbhuta! naanoo ille nimma cupertino dalle iddeene. neevu illi elliddeera?

July 14, 2008 10:13 PM
xx said...
kshamisi. Nanna parichaya maadikolluvuda marethe. Naanu saraswathi vattam antha. iththeechige taane bengaloorininda bandiddene. nanage nanna magalaLu nimma blog torisidalu. Odi bahaLa ishta aayithu. nimma innitara lekhanavannooo oduttiddene. specially the blog that you have written about 'mother's feeling' is excellent. Keep up the good job!

July 14, 2008 10:27 PM
ತೇಜಸ್ವಿನಿ ಹೆಗಡೆ- said...
ಶಾಂತಲಾ,

ದಾಂಪತ್ಯದ ಸಾರವನ್ನು.. ಅದರೊಳಗಿನ್ ಸಿಹಿ-ಕಹಿ ಪಿಸುಮಾತುಗಳನ್ನು, ವಿರಸ-ಸರಸಗಳನ್ನು ಓದಬೇಕಾದರೆ ಅದಕ್ಕೆ ಸಖೀಗೀತಕ್ಕಿಂತ ಉತ್ತಮ ಕವನ ಸಿಗಲಾರದೇನೋ. ಅದ್ಭುತ ಕವನ. ಗೂಡಾರ್ಥಗಳನ್ನೊಳಗೊಂಡಿದ್ದರೂ ಸರಳತೆಯನ್ನೇ ಹೊದ್ದು ಅದ್ದಿರುವ ಕವನ ನನ್ನ ಮೆಚ್ಚಿನ ಕವನವೂ ಹೌದು. ಅದನ್ನು ವಿವರಿಸಲು ಯತ್ನಿಸಿದ ನಿನ್ನ ಪ್ರಯತ್ನ ತುಂಬಾ ಶ್ಲಾಘನೀಯ. ತುಂಬಾ ಇಷ್ಟವಾಯಿತು. ಮತ್ತಷ್ಟು ಇಂತಹ ಬರಹಗಳು ಬರಲಿ.

July 15, 2008 8:00 AM
sunaath said...
ಶಾಂತಲಾ,
ಬೇಂದ್ರೆಯವರ ಸಖೀಗೀತದ ಸಾರವನ್ನು ಎಷ್ಟು ಚೆನ್ನಾಗಿ ಬರೆದಿದ್ದೀಯಮ್ಮ. ಅವರ ಇತರ ದಾಂಪತ್ಯಗೀತಗಳ ಭಾವಗಳನ್ನೂ ಸಂಕಲಿಸಿ, ಒಂದು ಲೇಖನವನ್ನು ನೀನು ನೀಡಿದರೆ
ಸ್ವಾರಸ್ಯಕರವಾಗುವದೆಂದು ನನ್ನ ಭಾವನೆ.
-ಸುನಾಥ ಕಾಕಾ

July 24, 2008 2:57 PM
ಸಿಮ್ಮಾ said...
ಶಾಂತಲಾ ಅವರೇ,
ನಂಗೆ ಈ ವಿಮರ್ಶೆ ಇದೆಲ್ಲಾ ಬರೋಲ್ಲ, ಅದೂ ಅಲ್ದೆ ನಾನು ಬೇಂದ್ರೆಯವರನ್ನ ಜಾಸ್ತಿ ಓದಿದವನೂ ಅಲ್ಲ. ಆದರೆ ಅವರ ಕೆಲವು ಕವನಗಳಲ್ಲಿನ ಸಾಲುಗಳು ತುಂಬಾ ಇಷ್ಟ ಅವುಗಳನ್ನಷ್ಟೇ ನಾನಿಲ್ಲಿ ಹಂಚಿ ಕೊಳ್ಳ ಬಲ್ಲೆ.
1. ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನ್ನೆರಕಾವ ಹೊಯ್ದ.
ಬಾಗಿಲುನ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ........

2. ನೀ ಹೀಂಗ ನೋಡ ಬ್ಯಾಡದಲ್ಲಿನ,
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ..

3. ಯುಗಾದಿಯ,

ವರುಷಕೊಂದು ಹೊಸತು ಜನ್ಮ
ಹರುಕೊಂದು ಹೊಸತು ನೆಲೆಯು
ಅಖಿಲ ಜೀವ ಜಾಲಕೆ

ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ,ಒಂದೇ ಹರೆಯ
ನಮಗದಷ್ಟೇ ಏತಕೆ?

ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದಗಳು

July 25, 2008 7:01 AM
ಶಾಂತಲಾ ಭಂಡಿ said...
@ಹರೀಶ
ಧನ್ಯವಾದಗಳು,
ನೀನು ಹೇಳಿದ್ದು ನಿಜ, ಅಲ್ಲೇ ಡಿಗ್ರಿ ತಗಂಡುಹೋದ್ರೂ ಎಂ.ಎಂ. ಅಂದ್ರೇನು ಅನ್ನೋ ಬಗ್ಗೆ ಯೋಚ್ನೆ ಮಾಡದ ಜನ ಇರ್ತ. ಎಂತಕ್ಕೆ ಹೇಳಿ ನಂಗೂ ಗೊತ್ತಿಲ್ಲೆ.

@XX
ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನೀವು ನನ್ನ ಬರಹಗಳನ್ನ ಇಷ್ಟು ಪ್ರೀತಿಯಿಂದ ಓದುತ್ತಿರುವುದು ನನ್ನ ಖುಷಿ.

@ತೇಜಸ್ವಿನಿ
ಧನ್ಯವಾದಗಳು,ಕಾಲೇಜಿನ ದಿನಗಳಲ್ಲಿ ಬರೆದದ್ದು, ತಪ್ಪುಗಳೆಷ್ಟಿವೆಯೋ ಗೊತ್ತಿಲ್ಲ, ನೀವು ಮೆಚ್ಚಿದ್ದು ನನ್ನ ಖುಷಿ.

@ಸುನಾಥ ಕಾಕ
ಧನ್ಯವಾದಗಳು, ಬೇಂದ್ರೆಯವರ ಬಾಂದಳದಿಂದ ಸುರಿದ ವರ್ಷಧಾರೆಯನ್ನ ಈ ಪುಟ್ಟ ಬೊಗಸೆಯಲ್ಲಿ ಹಿಡಿವ ಚಿಕ್ಕಯತ್ನವಾಗಿತ್ತು. ಏನೂ ಅರಿವಿರದ ದಿನಗಳಲ್ಲಿ ಬರೆದದ್ದು. ಈಗ ಬೇಂದ್ರಯವರ ಗೀತೆಗಳನ್ನ ಬಿಡಿಸಿಡುವುದು ನನ್ನಿಂದ ಅಸಾಧ್ಯವೇ.
ನೀವು ಆ ಕಾರ್ಯವನ್ನ ಚಂದದಿಂದ ನಿರ್ವಹಿಸುತ್ತಿದ್ದೀರಿ ಕಾಕಾ.
ಆ ಕಾರ್ಯವನ್ನ ನೀವೇ ಮಾಡಿದರೆ ಸೊಗಸು ಕೂಡ.
ನೀವು ಬರೆಯಿರಿ, ನನಗೆ ನಿಮ್ಮ ಬರಹಗಳು ತುಂಬ ಇಷ್ಟ.

@ಸಿಮ್ಮಾ
ನಿಮ್ಮಿಷ್ಟದ ಸಾಲುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.


ಎಲ್ಲರ ಗಮನಕ್ಕೆ: ಈ ಲೇಖನದ ಪುಟಗಳಲ್ಲಿ ಅನೇಕ ಮುದ್ರಣ ದೋಷಗಳಿವೆ.
‘ಸಖೀಗೀತ’ ‘ಸಖಿಗೀತ’ ಎಂದಾಗಿದೆ.
‘ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ’ ಎಂಬ ಸಾಲು
‘ಸಖೀ ನಮ್ಮ ಸಖ್ಯದ ಆಖ್ಯಾನ ಬಲು ಮಧುರ’ಎಂಬುದಾಗಿ ಓದಿದ ನೆನಪು.
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹದೆಂದೋ ಜೀವಕಳೆ’ ಎಂಬ ಸಾಲು
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹುದೆಂದೋ ಜೀವಕಳೆ’ ಎಂದಾಗಬೇಕೇನೋ ಎಂಬ ಗುಮಾನಿ. ಇವನ್ನೆಲ್ಲ ತಿದ್ದಲು ಸಧ್ಯಕ್ಕೆ ‘ಸಖೀಗೀತ’ ನನ್ನಲ್ಲಿ ಲಭ್ಯವಿರದ ಕಾರಣ ಈ ಪುಟಗಳಲ್ಲಿ ಇಂತಹ ದೋಷಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿರೆಂದು ಕೇಳಿಕೊಳ್ಳುತ್ತೇನೆ.

July 28, 2008 11:15 AM

July 7, 2008

ಸಿಂಡ್ರೆಲಾ

ಕಹಿಕಾಫಿಯಾಳದಲೂ ನಗು
ನಗು ಬಿರಿವಾಗ
ಏನೋ ನೋವು
ಕಹಿಕಾಫಿಯಾಳ
ಇನ್ನಷ್ಟು ಆಳ
ಮನದಾಳದಂತೆ

ಬಂದವಳು
ಹೊರಟೇ ಹೋದಳು
ಅದೇ ಸಮಯವಲ್ಲ
ಅದೊಂಥರ ವೇಳೆ
ಚಪ್ಪಲಿಯ ಸುಳಿವ
ಬಿಡಲಿಲ್ಲವೀಗಲೂ

ಫ್ರಿಜ್ಜೊಳಗೆ ತಣ್ಣಗೆ
ಕೂತ ಡಬ್ಬಗಳದು ಮಾತೇ ಇಲ್ಲ
ಸಿಟ್ಟಿಂಗ್ ಹಾಲಿನ ಮಧ್ಯೆ
ಅವಳದೇ ಹೊಲಿಗೆ ಯಂತ್ರ
ಕ್ರಿಸ್ ಮಸ್ ಗೆ ಕಾಯುತ್ತಲಿದೆ
ಕ್ರಿಸ್ ಮಸ್ ಟ್ರೀ
ನಾನವಳ ಬರುವ ಕಾಯುವಂತೆ

ನಿನ್ನದೇ ಕರೆಯಾ
ಬೆಳ್ಳಕ್ಕಿ ಮುಗಿಲೆ, ಸಾರಿ
ಸುಪ್ತವಾಗಿ ಮೊಬೈಲ್
ಮಾತಾಡಿದ್ದು
ಅರಿವಾಗಲಿಲ್ಲ

ಕಿಟಕಿಗಾನಿಸಿ ನಿಂತು
ನೋಡುತ್ತೇನೆ
ಮೇಲೆ ಬೆಳ್ಳಕ್ಕಿ ಹಿಂಡು
ಅದರೊಳಗೆ ಅವಳೂ ಒಬ್ಬಳಾ
ಆ ನನ್ನ ಸಿಂಡರೆಲಾ?

ಸುಮ್ಮನೆ ಸಾಗುವ ಸಾಲುಗಳು

*ಗುರುಬಲ*
ಗುರುವೇ ಬಲವಾಗಿ
ಬಲವೇ ಗುರುವಾಗಿ
ಬಂದಾಗಲೇ
ಬಂದಿದ್ದು
ಗುರುಬಲ

*ಅದೃಷ್ಟ*
ಕವಿತೆಯೊಳಗೆ
ಕಳೆದ
ಅದೇ ಬೀಗದ ಕೈ
ಲೇಖನದೊಳಗೆ
ಕೀಲಿಕೈ ಆಗಿ ಸಿಕ್ಕಿದ್ದು!

*ನೆನಪು*
ಹಾದಿಯುದ್ದಕ್ಕೂ
ಹರಿದು
ತೀರದುದ್ದಕ್ಕೂ
ತೀರದ
ಸಂಗಾತಿ

*ಹುಣ್ಣಿಮೆ*
ಮೋಡಮರಗಳ ರಾಶಿ
ತಾರೆಮರಿಗಳ ದಿಂಡು
ಕಣ್ಣುಗಳದೇ ಜಾತ್ರೆ
ಚಂದ್ರಿಕೆಯ ಪಲ್ಲಕ್ಕಿ
ಚಂದ್ರನಿಲ್ಲ!

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.