June 4, 2009

ತುಳಸೀವನ

ಬರೆಯಬೇಕು. ಬರೆಯುವುದಕ್ಕೆ ತುಂಬ ಇದೆ. ಈ ವಾರದಲ್ಲಿ ಧನ್ಯವಾದ ಅರ್ಪಿಸಲಿಕ್ಕೇಂತಲೇ ಸುಮಾರು ಏಳೆಂಟು ಪತ್ರಗಳನ್ನಾದರೂ ಬರೆಯಬೇಕಿದೆ. ಏನಂತ ಬರೆಯುವುದು, ಎಲ್ಲಿಂದ ಶುರುಮಾಡುವುದು, ಯಾರಿಗೆ ಮೊದಲು ಪತ್ರ ಬರೆಯುವುದು, ಗೊತ್ತಾಗುವುದೇ ಇಲ್ಲ. ಸುಮ್ಮನೆ ಪ್ಯಾಟಿಯೋದ ಗಾಜಿನ ಬಾಗಿಲ ಬಳಿ ನಿಂತಿದ್ದೇನೆ. ಗಿಡಗಳೇ ಇಲ್ಲದ ಅಂಗಳದ ಮಣ್ಣಿನ ವಾಸನೆಯೂ ಬರಿತೇ ಬೋಳು. ಮೇಲಿನ ಅಡ್ಡಕಂಬದ ಮೂಲೆಗೆ ಪಾರಿವಾಳ ಜಾತಿಯ ಹಕ್ಕಿ ಗೂಡು ಕಟ್ಟಿ ಎರಡು ಮೊಟ್ಟೆಗಳ ಮೇಲೆ ತಾನೇ ಕೂತಿದೆ. ಮೂರ್ನಾಲ್ಕು ತಾಸುಗಳಿಗೊಮ್ಮೆ ಬೇರೆ ಬೇರೆ ಕೋನದಲ್ಲಿ ಕೂತು ಕಾವು ಕೊಡುತ್ತಿದೆಯಿರಬೇಕು. ಅದನ್ನೇ ನೋಡುತ್ತ ಸುಮ್ಮನೆ ನಿಂತ ಮನಸ್ಸು ಮಾತ್ರ ವಸಂತೋತ್ಸವದಲ್ಲೇ ಇದೆ. ಗೆಳೆಯ ‘ಇತ್ತ ಬಾ ಸಾಕು’ ಅಂತ ಕರೆಯುತ್ತಾನೆ. ‘ಶ್... ಸುಮ್ಮನಿರು, ಪಾರಿವಾಳ ಗೂಡು ಕಟ್ಟಿದೆ’ ಅನ್ನುತ್ತೇನೆ. ‘ಈವತ್ತು ಗೂಡು ಕಟ್ಟಿದೆ, ಅದರೊಳಗೆ ಮೊಟ್ಟೆಯಿದೆ, ನಾಳೆ ಮರಿಯಾಗುತ್ತವೆ, ಚಿಲಿಪಿಲಿಗುಡುತ್ತವೆ, ನೀನು ಅದನ್ನೇ ನೋಡುತ್ತ ಆ ಹಕ್ಕಿಗೂಡನ್ನೇ ತುಂಬ ಹಚ್ಚಿಕೊಂಡು ಕೂರುತ್ತೀಯ. ನಾಳೆ ಅವು ಹಾರಿಹೋದ ಮೇಲೆ ನಿನ್ನ ಸಮಾಧಾನಿಸಲು ಯಾವ ಹಕ್ಕಿಯ ತರಬೇಕು ನಾನು?, ಸುಮ್ಮನೆ ಇತ್ತ ಬಾ’ ಅನ್ನುತ್ತಾನೆ. ಖಾಲಿಯ ಅಂಗಳತುಂಬಲು `ತುಳಸೀವನ' ಅರ್ಧ ಹಾದಿಯತನಕ ಬಂದಿದೆ. ನಾಳೆಯಾದರೂ ಸರಿ, ನಮ್ಮನೆಯ ಅಂಗಳಕ್ಕೆ ತಂದಿಡಬೇಕು ಅಂದುಕೊಳ್ಳುತ್ತ ಒಳಗೆ ಬಂದಿದ್ದೇನೆ.
ಅಮ್ಮನೂರಿಂದ ಬಂದಾಗಲೂ ಹೀಗೆಯೇ ಆಗಿತ್ತು. ಸ್ವಲ್ಪ ದಿನ ಬೇಕು ಸುಧಾರಿಸಿಕೊಳ್ಳಲು. ಯಾವುದಕ್ಕೂ ದೇಹಕ್ಕೂ ಮನಸಿಗೂ ಹಿಡಿದ ಜ್ವರದ ಸುಸ್ತು ಇಳಿಯಲಿ...

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.