November 14, 2007

ಮೂರುದಿನಗಳಿಂದ ಆಕಾಶ್, ರಾಜೀವ, ಮತ್ತು ಭರತಖಾನ್ ಒಂದೇ ಬಟ್ಟೆ ತೊಟ್ಟು ಓಡಾಡುತ್ತಿರುವುದು ಸೂಕ್ಷ್ಮಮತಿಯಾದ ಕವಿತಾ ಗಮನಿಸಿದರೂ ಯಾವುದೋ ಸಂಕೋಚ ಅವರಿಗೆ ಬಟ್ಟೆಬದಲಾಯಿಸುವ ಸಲಹೆ ನೀಡಲು ಅವಳನ್ನು ಹಿಂದೆಳೆದಿತ್ತು. ಆಕಾಶ್ ಮತ್ತು ರಾಜೀವ ಮನೆಯಲ್ಲೇ ಇದ್ದು ಅಂಟಿಕೊಂಡ ಎರಡುದಿನಗಳ ತಮ್ಮ ಬೇಸರವನ್ನು ಕಳೆಯಲು ನೀಲಿಕೆರೆಯಲ್ಲಿ ಈಜುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ತಕ್ಷಣವೇ ಹೊರಡುವ ಯೋಚನೆ ಬಂದು, ಧರಿಸಿದ ಫಾರ್ಮಲ್ ಶರ್ಟ್ ಗಳನ್ನು ಕಳಚಿಟ್ಟು,ಟೀಶರ್ಟ್ ಹಾಗೂ ಬರ್ಮುಡ ತೊಟ್ಟು ನೀಲಿಕೆರೆಯೆಡೆ ವ್ಯಾವಹಾರಿಕ ಮಾತುಗಳನ್ನು ಹಂಚಿಕೊಳ್ಳುತ್ತ ನಡೆದಿದ್ದರು. ಆಕಾಶ್ ಮತ್ತು ರಾಜೀವರಿಗೆ ನಗರದ ಈಜುಕೊಳಗಳಲ್ಲದೇ ನಿಸರ್ಗದ ಮಡಿಲೊಳಗೆ ಮತ್ತೊಂದು ಮಡಿಲಿನಂತೆ ಕಾಣುವ ಕೆರೆಗಳಲ್ಲಿಯೂ ಈಜಿ ದಡ ಸೇರುವ ಚಾತುರ್ಯ ಬಾಲ್ಯದ ಆಟಗಳಲ್ಲಿ ಒಂದಾಗಿತ್ತು. ಇವೆಲ್ಲ ಅರಿಯದ ಭರತನನ್ನು‘ನಾವಿದ್ದೇವೆ, ನಿನ್ನನ್ನು ಮುಳುಗಲು ಬಿಡ್ತೀವಾ? ಬಾ ಹೋಗೋಣ’ ಎಂದು ಆಕಾಶ್ ನೀಡಿದ ಭರವಸೆ ತನ್ನ ಮತ್ತು ಆಕಾಶ್ ಗಿರುವ ಸಂಬಂಧವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತ್ತು. ಈ ಸಜ್ಜನರ ನಡುವೆ ತಾನಿರಲು ಪಡೆದಿರದ ಅದೃಷ್ಟದ ಬಗ್ಗೆ ತನ್ನ ಬಗ್ಗೆ ತಾನೇ ಮರುಕಪಡಬೇಕಾಗಿ ಬಂದ ತನ್ನಸ್ಥಿತಿಯ ಬಗ್ಗೆ ಮರುಕಪಡಲು ತನ್ನೊಬ್ಬನನ್ನು ಬಿಟ್ಟರೆ ಯಾರಿಲ್ಲವಲ್ಲವೆನಿಸಿ ಮೊದಲಬಾರಿಗೆ ಅನಾಥಪ್ರಜ್ನೆ ಕಾಡತೊಡಗಿತ್ತು. ತಾಯಿಯ ಪತ್ರವನ್ನು ಓದಿದ್ದ ಮನಸ್ಸು ನೂರು ಧ್ವನಿಗಳನ್ನು ಆಲಿಸುತ್ತಿರುವ ಎರಡು ಕಿವಿಗಳ ಪಾಡಾಗಿ ಗೊಂದಲದಲ್ಲಿ ಸಿಲುಕಿತ್ತು. ತಾನೆಲ್ಲಿ ಹೋಗುತ್ತಿದ್ದೇನೆ ಎಂಬ ಅರಿವಿಲ್ಲದೆಯೇ ಆಕಾಶ್ ಮತ್ತು ರಾಜೀವರೊಡನೆ ಹೆಜ್ಜೆಗಳನ್ನು ಕೂಡಿಸಿಕೊಂಡಿದ್ದ.


ಇತ್ತ ಅವರೆಲ್ಲ ಮನೆಯ ಆವರಣ ದಾಟಿ ದೂರವಾಗಿದ್ದನ್ನು ಕಂಡ ಕವಿತಾ ಅವರೆಲ್ಲರ ಬಟ್ಟೆಗೆ ಈ ಮನೆಯ ನೀರಲ್ಲಿ ಸ್ನಾನ ಕಾಣಿಸುವ ತವಕದಿಂದ ಎಲ್ಲರ ಶರ್ಟ್ಸ್ ಮತ್ತು ಪ್ಯಾಂಟ್ಸಿನ ಕಿಸೆಗಳನ್ನು ಖಾಲಿ ಮಾಡಿ ಆ ವಸ್ತುಗಳನ್ನು ಪಕ್ಕದಲ್ಲಿದ್ದ ಮೇಜಿನ ಮೇಲಿಡುವ ಸನ್ನಾಹದಲ್ಲಿರುವಾಗ ಭರತನ ಅಂಗಿಕಿಸೆಯಲ್ಲಿನ "PRIVATE: To Bharata Kaan" ಎಂಬ ಹಣೆಪಟ್ಟಿಯೊಂದಿಗೆ ಮಡಚಿದ್ದ ಕಾಗದ ಕುತೂಹಲ ಹುಟ್ಟಿಸಿತು. ಹೀಗೆ ಬೇರೆಯವರ ಕಾಗದ ಓದುವುದು ಗುಣವಲ್ಲ ಎಂದು ಮನಸ್ಸು ಒಮ್ಮೆ ನುಡಿದರೂ, ಪ್ರಥಮಬಾರಿಗೆ ಪ್ರೀತಿ ಅಂಕುರಿಸಿದ ಪುರುಷನ ಮೇಲಿನ ಆಸಕ್ತಿ ಈ ಲೆಟರ್ ಒಳಗಿನ ಬರಹವನ್ನು ಓದಲು ಅವಳನ್ನು ಪ್ರೇರೇಪಿಸಿತ್ತು. ಮನೆಯಲ್ಲಿ ಮತ್ತೊಬ್ಬರ ಕಣ್ಣಿಗೆ ಬೀಳುವ ಮುನ್ನ ಸರಸರನೇ ಲೆಟರನ್ನು ಭರತನ ಶರ್ಟ್ ಪಾಕಿಟಿನೊಳಗಿಟ್ಟು, ಸ್ನಾನದ ನೆಪದಿಂದ ಶರ್ಟ್ ಸಮೇತ ಬಾತ್ ರೂಂ ಸೇರಿ ಬಾಗಿಲು ಭದ್ರಪಡಿಸಿಕೊಂಡಳು. ನಿರಾಳವಾಗಿ ಲೆಟರ್ ತೆಗೆಯುವ
ಸಲುವಾಗಿ ಶರ್ಟ್ ಕಿಸೆಯೊಳಗೆ ಕೈ ತೂರಿ ತೆಗೆದರೆ ಅವಳಿ ಕಾಗದಗಳು ಕೈಗೆ ಬಂದವು! ಒಂದರ ಮೇಲೆ PRIVATE:To Bharata Kaan ಎಂದಿದ್ದರೆ, ಇನ್ನೊಂದು ಹಣೆಬರೆಹವಿಲ್ಲದ್ದು!(ಹಣೆಬರಹ ಇಲ್ಲದವನು ಬರೆದದ್ದು ಎಂದರೂ ಸರಿಯೆ.)
ಮೊದಲು ಸಿಕ್ಕ ಲೆಟರ್ ಮಾತ್ರ ಪ್ರವಲ್ಲಿಕಾಳದೇ ಇರಬಹುದು! ಇನ್ನೊಂದು ! ಭರತ್ ಪ್ರವಲ್ಲಿಕಾಳಿಗೆ ಬರೆದ ರಿಪ್ಲಾಯ್ ಇರಬಹುದು ಎಂಬ ಸವತಿಮತ್ಸರದ ಗುಮಾನಿಯ ಜೊತೆ ಆಸಕ್ತಿ ಜಾಸ್ತಿಯಾದುದರಿಂದ To Bharata Kaan ಎಂದಿದ್ದ ಲೆಟರನ್ನು ಓದಲು ಮೊದಲಿಗೆ ಅನುವಾದಳು. ಕಾಗದ ಓದಿ ಮುಗಿದಾಗ ಭರತನ ಗತ ಜೀವನದ ನೂರರಲ್ಲಿ ನಲವತ್ತರಷ್ಟು ಭಾಗ ತನ್ನ ವಶಕ್ಕೊಳಗಾದ ಅನುಭವ ಭೀತಿ ಹುಟ್ಟಿಸಿತಾದರೂ, ಅವನ ಮೇಲಿನ ಆಕರ್ಷಣೆ ಅನುಕಂಪವಾಗಿ ಅವಳೊಳಗೆ ಅಡಗಿ ಮೊಳಕೆಯೊಡೆಯುತ್ತಿದ್ದ ಪ್ರೀತಿಗೆ ಸತ್ವ ಉಣಿಸಿತ್ತು. ಡವಢವನೆ ಹೊಡೆದುಕೊಳ್ಳುತ್ತಿದ್ದ ಹೃದಯವು ಎರಡನೆಯ ಕಾಗದವನ್ನು ಓಪನ್ ಮಾಡುವಾಗ ಕೈಗಳನ್ನು ನಡುಗಿಸಿ ಕೈಯಲ್ಲಿನ ಕಾಗದ ಬಾತ್ ರೂಂ ನೆಲಕಂಟಿ ಮಲಗಿದ್ದ ಹಾಸುಗಲ್ಲನ್ನು ಸ್ಪರ್ಷಿಸುವ ತವಕದಲ್ಲಿದ್ದಾಗಲೇ ಎತ್ತಿಕೊಂಡು ಮೈಮೇಲಿನ ತೊಟ್ಟಬಟ್ಟೆಗೆ ನವುರಾಗಿ ಉಜ್ಜಿದಳು. ಕಾಗದ ಲವಲೇಶವೂ ತೇವವಾಗಿರಲಿಲ್ಲ. ಬಿಡಿಸಿ ಓದಿದರೆ,
ಡೀಯರ್ ಮಾಮ್..ಎಂಬ ಕಂಠದಾಳದ ಕರೆಯೆಂಬಂತೆ ಆರಂಭಗೊಂಡ ಸಾಲು ತಾನು ಪ್ರವಲ್ಲಿಕಾಳನ್ನು ಈ ಕ್ಷಣದಲ್ಲಿಯೇ ಮದುವೆಯಾಗುವ ವಿಚಾರವನ್ನು ಕೈಬಿಟ್ಟು, ಅವಳನ್ನು ಸಹೋದರಿಯಾಗಿ ಸ್ವೀಕರಿಸಿದ್ದಲ್ಲದೇ, ಇಂದು ರಾತ್ರಿ ಎಲ್ಲರ ಕಣ್ಣಿಂದ ದೂರವಾಗಿ ಮನೆಯಿಂದ ಹೊರಡುತ್ತಿರುವ ತನ್ನ ಪಯಣದ ವಿವರಗಳಾದಿಯಾಗಿ ಎಲ್ಲ ಸಾಲುಗಳನ್ನು ಭರಿಸಿದ್ದಲ್ಲದೆ
ಫಾರ್ ಎವರ್ ಎನ್ ಎವರ್
ಯುವರ್ ಸನ್
ಭರತಖಾನ್. ಎಂಬ ಭರವಸೆಯ ನುಡಿಯೊಂದಿಗೆ ಅಂತ್ಯ ಕಂಡಿತ್ತು. ಅಂತಿಮವಾಗಿ ತಾಯಿಯ ಮುಖದರ್ಶನ ಮಾಡಿ ಈ ಕಾಗದ ತಲುಪಿಸಿ ಕಣ್ಮರೆಯಾಗುವ ಉದ್ದೇಶದಿಂದ ಭರತಕಾನ್ ತನ್ನಮ್ಮನಿಗೆ ಬರೆದಿಟ್ಟ ಕಾಗದ ಅದಾಗಿತ್ತು.

ಈ ಎಲ್ಲವ ಓದಿಮುಗಿಸಿ ತುಂಬಿಕೊಂಡ ಕಣ್ಣಾಲೆಗಳನ್ನು ಒರೆಸಿಕೊಂಡ ಕವಿತಾ ಕಾಗದದೊಂದಿಗೆ ಎಲ್ಲ ಬಟ್ಟೆಗಳನ್ನು ಮೇಜಿನ ಮೇಲಿನ ಪರ್ಸ್,ಪೆನ್ ಗಳೊಂದಿಗೆ ಆಯಾ ಜಾಗಗಳಲ್ಲಿ ಮೊದಲಿಟ್ಟಂತೆ ಅಣಿಗೊಳಿಸಿ ನಿಟ್ಟುಸಿರುಬಿಟ್ಟು ಮನೆಯಲ್ಲಿ ಸ್ವಕಾರ್ಯಗಳಲ್ಲಿ ಮಗ್ನರಾದ ಎಲ್ಲರ ಗಮನಕ್ಕೆ ಇವು ಯಾವುವೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಖಿನ್ನ ಮನಸ್ಕಳಾಗಿ ಹೊರಜಗಲಿಯಲ್ಲಿ ಕುಳಿತು ಯೋಚಿಸತೊಡಗಿದಳು. ಥಟ್ಟನೆ ಯೋಚನೆಯೊಂದು ಹೊಳೆದು ಅದು ನಿರ್ಧಾರವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಅವಳೀಗ ತೆಗೆದುಕೊಂಡ ನಿರ್ಧಾರದಲ್ಲಿ ತಪ್ಪು-ಸರಿಗಳು ತಮ್ಮ ಅರ್ಥದ ಸ್ಥಾನವನ್ನು ಅದಲುಬದಲಾಯಿಸಿಕೊಂಡಿದ್ದು ಎಷ್ಟು ಸರಿ ಎಂಬುದನ್ನು ವಿವೇಚಿಸುವಷ್ಟು ಸಮಯ-ಸಂಯಮಗಳೆರಡೂ ಅವಳಲ್ಲಿ ಇರಲಿಲ್ಲ. ಆ ಕ್ಷಣದ ಸಮಸ್ಯೆಗೆ ಸರಿಯಾದ ಪರಿಹಾರ ಅವಳಿಂದ ಆಗಲಿದ್ದ ಆ ತಪ್ಪೊಂದೇ ಆಗಿತ್ತು!

ನೀಲಿಕೆರೆಯಲ್ಲಿ ಈಜಿ ಸುಸ್ತಾಗಿ ಮನೆಗೆ ಬಂದ ಆಕಾಶ್ ಮತ್ತು ರಾಜೀವ ಕುಳಿತು ನೀರಲ್ಲಿಳಿದ ಪ್ರಸಂಗಗಳನ್ನು ಬಣ್ಣಬಣ್ಣವಾಗಿ ಎಲ್ಲರಿಗೂ ವಿವರಿಸುತ್ತಿದ್ದರೆ ಭರತ್ ಮನದೊಳಗೆ ಹಲವು ಬಣ್ಣಗಳು ಕಲೆತು ಮೇಲೋಗರವಾಗಿ ಮುಖ ಸೌಂದರ್ಯಕಳೆದುಕೊಂಡಿತ್ತು. ಅವನ ಸಪ್ಪೆ ಮುಖ ಎಲ್ಲರಿಗೆ ನೀರಲ್ಲಿಳಿದ ಸುಸ್ತಾಗಿ ಕಂಡರೆ ಕವಿತಾಳಿಗೆ ಅದೇ ಮುಖ ಮನದಾಳದ ಕತೆಯನ್ನು ಹೇಳುತ್ತಿರುವಂತೆ ಕಂಡಿತ್ತು.

ಸಂಜೆ ಕಳೆದು ರಾತ್ರಿ ಊಟವಾದ ಮೇಲೆ ‘ಇಲ್ಲೇ ಮುಂದಿನ ತೋಟದ ಬೆಳದಿಂಗಳ ಅಂಗಳದಲ್ಲಿ ಸ್ವಲ್ಪ ವಿಹರಿಸುತ್ತೇನೆ’ ಎಂದು ಹೊರಟವಳಿಗೆ ಯಾರ ಆಡ್ಡಿಯೂ ಬಾರದಿದ್ದುದಕ್ಕೆ ಕಾರಣ ‘ಬೆಳದಿಂಗಳ ಅಂಗಳದ ವಿಹಾರ’ ಅವಳ ಆಗಾಗಿನ ಅಭ್ಯಾಸವಾದ್ದರಿಂದ. ಆದರೆ ಅವಳು ಕುಳಿತಿದ್ದು ಮೊದಲೆ ತಾನು ಅನ್ಲಾಕ್ ಮಾಡಿಟ್ಟುಕೊಂಡಿದ್ದ ಭರತಖಾನನ ಕಾರಿನ ಹಿಂಬದಿಯ ಸೀಟಿನ ಕತ್ತಲ ಭಾಗದಲ್ಲಿ. ಹಿಂದೆ ಟ್ರಂಕಿನಲ್ಲಿ ಬೆಳಿಗ್ಗೆ ತಂದಿಟ್ಟ ಬಟ್ಟೆಬರೆಗಳನ್ನು ಬಿಟ್ಟು ಉಳಿದೆಲ್ಲ ತನ್ನದು ತನ್ನವರನ್ನು ಕವಿತಾ ತೊರೆಯಲು ಮನಸ್ಸನ್ನು ಶೀಘ್ರವಾಗಿ ಅಣಿಗೊಳಿಸಿಕೊಂಡಿದ್ದಳು!

ಎಲ್ಲರೂ ಮಲಗಿದಾಗ ಶಾರದಮ್ಮ ಅವಳನ್ನು ಒಳಬರುವಂತೆ ಹೇಳಿ ಉತ್ತರಕ್ಕೆ ನಿಲ್ಲದೆ ಅವಳಿಗೋಸ್ಕರ ಬಾಗಿಲು ಮುಚ್ಚದೇ ಮಲಗಿಬಿಟ್ಟಿದ್ದರು. ತೆರೆದಿಟ್ಟ ಬಾಗಿಲು ಕವಿತಾಳನ್ನು ಬರಮಾಡಿಕೊಳ್ಳದೇ ನಡುರಾತ್ರಿಯಲ್ಲಿ ನಡೆದ ಭರತಖಾನನಿಗೆ ಸಹಾಯಹಸ್ತ ಬೀಸಿ ಬೀಳ್ಕೊಟ್ಟಿತ್ತು.
ಬಾಗಿಲು ತೆರೆದೇ ಇದ್ದುದ್ದು ಏಕೆಂಬುದನ್ನೂ ಕೂಡ ವಿವೇಚಿಸಲಾಗದಂತಿದ್ದ ಭರತಖಾನ ಭೂತ ಬಡಿದವನಂತೆ ಭರಭರನೇ ಹೊರಗಡೆ ಬಂದು ಕಾರಲ್ಲಿ ಕೂತಿದ್ದ. ಭರತನಿಂದ ಚಾಲನೆ ಪಡೆದ ಕಾರು ಶರವೇಗದಿಂದ ಬೆಂಗಳೂರಿನ ಕಡೆ ಓಡುತ್ತಿತ್ತು.

(ತುಳಸೀವನದಲ್ಲಿ ಪ್ರಕಟವಾದ ಐದಾರು ಕಥೆಗಾರರು ಕೂಡಿ ಬರೆದ ಕಥೆಯೊಳಗಿನ ನಾ ಬರೆದ ಭಾಗ)

November 3, 2007

ಧನ್ಯವಾದಗಳು.


ಕೊನೆಕೊಯಿಲಿಗೆ ಒಂದು ಅವಕಾಶ ಮಾಡಿಕೊಟ್ಟ ‘ದಟ್ಸ್-ಕನ್ನಡ’ಕ್ಕೆ ಧನ್ಯವಾದಗಳು.
ಪ್ರಕೃತಿ ವಿಕೋಪ, ರಾಜಕೀಯ, ಸಿನೇಮಾರಂಗಗಳ ನಡುವೆ ಕೊನೆಕೊಯಿಲಾಗಿತ್ತಿರುವುದನ್ನು ನೋಡಬೇಕೆ?ಇಲ್ಲಿ ಕ್ಲಿಕ್ಕಿಸಿ

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.