January 12, 2008

ಇಂದು ಬೆಳಗಿನಲಿ

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ...

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ.

ನಿಮ್ಮೆಲ್ಲರ ನೆನೆಯುತ್ತಾ ನನ್ನೀ ಬೆಳಗನ್ನು ಆರಂಭಿಸುತ್ತೇನೆ. ಎಲ್ಲೋ ಇದ್ದು, ಮತ್ತೆಲ್ಲೋ ಇದ್ದು, ಇಲ್ಲೇ ಇದ್ದು ಸ್ಪಂಧಿಸುವ ನಿಮ್ಮೆಲ್ಲರೊಂದಿಗೆ ಆರಂಭವಾಗುವ ಬೆಳಗು ಸುಂದರವೆನಿಸುತ್ತದೆ, ಆಹ್ಲಾದವೆನಿಸುತ್ತದೆ, ಕಂಬನಿ ತರುತ್ತದೆ. ಪ್ರೀತಿ ಉಕ್ಕಿಸುತ್ತದೆ, ಮತ್ತೆ ನಿಮ್ಮೆಲ್ಲರ ಬಗ್ಗೆ ಮತ್ತದೇ ಅಭಿಮಾನ ಮೂಡಿಸಿಬಿಡುತ್ತದೆ. ಮನ ತುಂಬಿ ಬಂದಾಗ ನಿಮ್ಮ ಮುಂದಿಟ್ಟು ಖಾಲಿ ಮಾಡಿಕೊಳಲೇ ಎನಿಸಿಬಿಡುತ್ತದೆ. ಕಂಡ, ಕಂಡಿರದ, ಅರಿಯದ, ಅರಿತ, ಪರಿಚಿತ, ಅಪರಿಚಿತ ಮುಖಗಳ ಚಿತ್ರಣ ಮುಂದೆ ಬರುತ್ತದೆ. ನನ್ನ ಭಾವನೆಗಳಿಗಿಷ್ಟು ತಿಳಿ ಹೇಳುವ ನೀವುಗಳು, ಅದೇ ಭಾವಗಳ ಜೊತೆ ಮಾತಾಡುವ ನೀವುಗಳು, ಮಾತನಾಡದೆಯೇ ಮನತುಂಬಿಕೊಳ್ಳುವ ನೀವುಗಳು, ಮೌನವಾಗಿ ಬಂದು ನನ್ನ ಮಾತುಗಳ ಕೇಳಿ ಮೌನವಾಗಿಯೇ ಹೊರಡುವ ನೀವುಗಳು ಒಬ್ಬೊಬ್ಬರಾಗಿ ಮನದ ಕಣ್ಣೊಳಗೆ ಹಾದು ಹೋಗುತ್ತಿರಿ. ಒಬ್ಬರು ನಿಧಾನಕ್ಕೆ ನಡೆದರೆ, ಇನ್ನೊಬ್ಬರು ಹಿತವಾದ ವೇಗದಿ, ಮಗದೊಬ್ಬರು ಭರ್ರನೆ ನಡೆದು ಮನ ಕಾಣಿಸದೇ ಬ್ಲರ್ ಆಗಿಬಿಡುತ್ತಾರೆ. ಮಗ ಬಂದು "ಇಲ್ಲೊಂಚೂರು ಟೇಪ್ ಹಾಕು" ಎನ್ನುತ್ತಾನೆ. ಟೇಪ್ ಹಾಕಿ ಹರಿದು ಹೋದವುಗಳ, ಒಡೆದು ಹೋದವುಗಳ ಕೂಡಿಸಿ ಬರುವಷ್ಟರಲ್ಲಿ ಯಾರೋ ಬಂದು ನಡೆದು ಬಿಟ್ಟಿರುತ್ತಾರೆ. ಆದರೂ ದುಗುಡದ ಕೊಡ ಹೊತ್ತವರ, ನಗೆ ಹೊನಲ ಕೆತ್ತಿದವರ, ಮಾತುಗಳ ಮುಚ್ಚಿಟ್ಟು ಮೌನವಾದವರ, ಮಾತುಗಳ ಬೆಳೆ ಬೆಳೆದವರ, ಮಾತುಗಳ ಧಾನ್ಯವನೊಂದಿಷ್ಟು ದಾನ ಮಾಡಿದವರ ಮುಖಗಳು ಹಾದು ಹೋಗುವ ಸರಣಿಯಲಿ ಸಾಲುಗಳ ಹಾಗೆ. ಇನ್ನೇನ ಹೇಳಲಿ ನಿಮ್ಮಗಳ ಬಗ್ಗೆ! ನನ್ನೀ ಓದುಗ ದೊರೆಗಳ ಬಗ್ಗೆ. ಸಂಕ್ರಾಂತಿಯ ಸಿಹಿಯಲ್ಲಿ, ಯುಗಾದಿಯ ಸಿಹಿ-ಬೇವಿನಲಿ, ಹುಣ್ಣಿಮೆಯ ಬೆಳದಿಂಗಳಿನೊಲು, ಅಮವಾಸ್ಯೆಯ ಕತ್ತಲೆಯಲಿ, ಮೇಣದ ಬತ್ತಿಯ ಮಂದದಲಿ, ಟಾರ್ಚ್ ನ ಶಾರ್ಪಿನಲಿ, ಹೀಗೆ...ಎಲ್ಲೆಲ್ಲೂ ಮುನ್ನಡೆಯಲು ಹಾದಿ ಮಾಡುವ ನಿಮ್ಮಗಳ ನಾ ಮರೆಯಲಿ ಹೇಗೆ?

ಆದರೂ ಒಂದಿಷ್ಟು ಹೇಳಬೇಕೆನ್ನುತ್ತಿದೆ ಮನ.

ನನ್ನೆಲ್ಲ ಓದುಗ ದೊರೆಗಳಿಗೂ, ನೀವೆಲ್ಲ ತೋರಿದ ಪ್ರೋತ್ಸಾಹಕ್ಕೂ, ಸಲಹೆಗಳಿಗೂ ನಾ ಆಭಾರಿ. "ಎಷ್ಟೆಲ್ಲ ಬರಿತ್ಯೆ ಮಾರಾಯ್ತಿ, ತಿಂಗಳಿಗೊಂದು ಪೋಸ್ಟ್ ಕೊಡು, ಓದಲು ಟೈಮ್ ಸಾಕಾಗ್ತಾ ಇಲ್ಲೆ" ಅಂತ ಸಲಹೆಯಿತ್ತು ನನ್ನ ಆಳಸಿತನಕ್ಕೆ ಸೊಪ್ಪು ಹಾಕಿದ ಪುಟ್ಟ ತಮ್ಮ ಸುಶ್ರುತನಿಗೂ, "ಎಲ್ಲ ಧರ್ಮಗಳ ಹಬ್ಬಕ್ಕೂ ಲೇಖನ ಕೊಟ್ಟು, ನಮಗೆಲ್ಲ ಅಜೀರ್ಣವಾಗುತ್ತಿದೆ"ಯೆಂದು ನೇರವಾಗಿ ನುಡಿದ mdಯವರಿಗೂ, "ಅನವಶ್ಯಕ ದೀರ್ಘ"ಗಳ ಬಗ್ಗೆ ನಗಿಸುತ್ತ ಸಲಹೆಯಿತ್ತ ಭಾಗವತರಿಗೂ, "ಎನ್ನೊಳಗ ದೀಪ" ಕವನದಲ್ಲಿ ತಪ್ಪಿದ ಕಾಗುಣಿತ ತಿದ್ದಿಸಿದ ಜ್ಯೋತಿ ಅಕ್ಕನಿಗೂ, "ಬೊಗಸೆಯೊಳಗಣ ಭಾವ" ಕವನದ ಸಾಲುಗಳ ತಿದ್ದಲು ಸಲಹೆಯಿತ್ತ proton ಅವರಿಗೂ, ಹೀಗೆಯೇ ಅದೆಷ್ಟೋ ಸಲಹೆಯಿತ್ತ ತಮ್ಮೆಲ್ಲರಿಗೂ ಇಂತದೇ ಇನ್ನಷ್ಟು ನೇರ ಸಲಹೆಗಳನ್ನು ಕೊಡಬೇಕಾಗಿ ಕೇಳಿಕೊಳ್ಳುವ ಜೊತೆ ಧನ್ಯವಾದಗಳನ್ನು ಹೇಳುತ್ತೇನೆ. "ನನ್ನ ಲೇಖನವೊಂದಕ್ಕೆ ನಿನ್ನ ಪಾತ್ರ ಬೇಕಾಗಿದೆ, ತೊಗೊಳ್ಲಾ?" ಎಂದಾಗ "no probs" ಎಂದು "ನಕ್ಕು ಬಿಡು ಒಮ್ಮೆ" ಕಥಾನಕಕೆ ಪಾತ್ರವಾದ ರವಿಗೂ ನನ್ನ ವಂದನೆಗಳು. ಇಷ್ಟೇ ಅಲ್ಲದೆ ಅದೆಷ್ಟೋ ಅನಿಸಿಕೆಗಳನ್ನು ತೆರೆದಿಟ್ಟು ಮನವನ್ನು ಇಲ್ಲೇ ಬಿಟ್ಟು ಹೋದ ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಅನಂತ ವಂದನೆಗಳು. ಅದೆಷ್ಟೋ ಓದುಗ ಮಿತ್ರರು ಅನಿಸಿಕೆ ಹೇಳದಿದ್ದರೂ ನಿಮ್ಮಗಳ ಮನ ಇಲ್ಲಿ ಓಡಾಡಿ ಅಳಿಸದೇ ಇರುವ ಭಾವದ ಛಾಪುಗಳನ್ನು ಹಿಟ್ ಕೌನ್ಟರ್ ಹಿಡಿದಿಟ್ಟುಕೊಂಡಿದೆ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

ನೀವುಗಳೆಲ್ಲ ನನ್ನ ಬ್ಲಾಗ್ ಗಳಲ್ಲಿ ಬರೆದಂತೆಯೇ ನನ್ನ ಬರವಣಿಗೆಗೆ ಸಂಬಂಧಿಸಿದ ಪತ್ರವೊಂದರ ಖುಷಿ ನಿಮ್ಮೆಲ್ಲರನು ಪುನಃ ಪುನಃ ನೆನಪಿಸುವುದಲ್ಲದೇ ಇದನ್ನು ತಮ್ಮೆಲ್ಲರೊಂದಿಗೆ ಈ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿದೆ. ತೇಜಸ್ವಿನಿ ಅವರ ಆ ಮೇಲ್ ಅನ್ನು ನೇರವಾಗಿ ಈ ಲೇಖನದ ನನ್ನೆಲ್ಲ ಓದುಗ ದೊರೆಗಳ ಮುಂದಿಡುತ್ತಿದ್ದೇನೆ.ಅಂತೆಯೇ ಪತ್ರ ಬರೆದ ತೇಜಸ್ವಿನಿಯವರಿಗೆ ನನ್ನ ಧನ್ಯವಾದಗಳು. ಹೊಸವರ್ಷದ ಈ ಹೊಸ ಪತ್ರ ಓದಿ ಯಾಕೋ ಕಣ್ಣಂಚು ಒದ್ದೆ. ಸಾವಿರ ಮೈಲುಗಳಾಚೆಯ ಸ್ನೇಹಕ್ಕೆ ಸೇತುವೆಯಾಗಬಲ್ಲವು ಈ ನನ್ನ ಸಾಲುಗಳು ಎಂಬುದಾಗಿ ಬರೆವಾಗ ನಾ ಯೋಚಿಸಿರಲಿಲ್ಲ.
ಈ ಮುಂದಿನ ಸಾಲುಗಳು ಲೇಖಕಿ ತೇಜಸ್ವಿನಿಯವರು ಬರೆದ ಸಾಲುಗಳು.




ನಿಮ್ಮೆಲ್ಲರ ಹೇಳಿಕೆಗಳಿಗೆ ನಾ ಎಷ್ಟು ಪಾತ್ರಳೋ ಗೊತ್ತಿಲ್ಲ. ಮನಕೆ ತೋಚಿದ್ದನ್ನ ಗೀಚಿಬಿಡುವ ನನ್ನ ಬರವಣಿಗೆಗಳಲ್ಲಿ ತಿರುಳೆಷ್ಟಿದೆಯೋ ಕಾಣೆ. ಇಲ್ಲಿನ ತಪ್ಪುಗಳ ಎಣಿಸಿ ಲೆಕ್ಕವಿಡುವ ಕರಣಿಕನು ಯಾರೋ! ಇಂತಿದ್ದರೂ ಪ್ರೋತ್ಸಾಹಿಸುವ ನಿಮಗೆಲ್ಲ ನಾ ಚಿರಋಣಿ.



ಸಿಂಧು ಅವರಿಗೆ, ನನ್ನಮ್ಮನಿಗೆ, ನನಗೆ ಹಾಗೂ ನಿಮ್ಮಲ್ಲರಿಗೆ ಇಷ್ಟವಾದ ಈ ಸಾಲುಗಳನ್ನು ಮಾತ್ರ ನಿಮ್ಮೆಲ್ಲರಿಗಾಗಿ ಹೇಳಬಲ್ಲೆ, ಅದೆಂದರೆ ಕೆ.ಎಸ್.ಎನ್ ಅವರು ಬರೆದ
"ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ಮತ್ತೊಮ್ಮೆ ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ,

ಈ ಹಿಂದಿನ ಪ್ರೋತ್ಸಾಹವ ಮುಂದೆಯೂ ತಮ್ಮೆಲ್ಲರಲಿ ಕೇಳಿಕೊಳ್ಳುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳುತ್ತಾ, ಬ್ಲಾಗೆಂಬ ಬೊಗಸೆಯೊಳಗೆ ನೀವಿತ್ತ ಪ್ರೋತ್ಸಾಹ-ಪ್ರೀತಿಗಳ ಮನದಲ್ಲಿ ತುಂಬಿಟ್ಟುಕೊಳ್ಳುತ್ತಾ, ತಮ್ಮೆಲ್ಲರ ಪ್ರೋತ್ಸಾಹದ ಭಿಕ್ಷೆಗಾಗಿ ಸದಾ "ಭಿಕ್ಷಾಂದೇಹಿ" ಎನ್ನುವ ನಿಮ್ಮೆಲ್ಲರ
-ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.