December 19, 2007

ಸಿಂಡರೆಲಾ

ಕಹಿ ಕಾಫಿಯ ಆಳದಲಿ
ಅವಳು ನಕ್ಕು ಸಿಹಿಯಾಗಿ
ನನ್ನೆದೆಯ ಪ್ರೇಮ ಸುಪ್ತವಾಗಿಳಿದು
ಅರಿಯೆನೆಂದಿತು ಹೆಸರ
"ಯಾರೇ ನೀನು ಬೆಳ್ಳಕ್ಕಿ ಮುಗಿಲೇ"
ಪ್ರಶ್ನೆಗೂ ಮುನ್ನ ಹೊರಟೇ ಹೋದಳು
"ಹನ್ನೆರಡಾಯಿತು,ಅವನು ಕಾಯುತ್ತಾನೆ ಬಂದು,
ನಾನಿನ್ನು ಹೊರಡುತ್ತೇನೆ" ಎಂದು
ಉಲಿದವಳು ನಿಲ್ಲಲೇ ಇಲ್ಲ
ಎಲ್ಲವಳೆಂದು ಶೋಧಿಸಲು
ತನ್ನೊಂದು ಚಪ್ಪಲಿಯ
ಸುಳಿವ ಬಿಟ್ಟಿರಲಿಲ್ಲ

ಯಾರಿವಳು?
ಸಂಜೆಬೆಳ್ಳಕ್ಕಿಯ ಹಾದಿಯೆಡೆ ಮೊಗಮಾಡಿ
ನಡೆದಳೋ ಆರಾಧನಾ ದೀಪ್ತಿಯಂತೆ
ನೋಟಕೂ ನೂರರ್ಥ ಹಚ್ಚಿ
ಆಳದೊಳಗೊಂದು ನಗು ಬಿತ್ತಿ
ಮೆಲ್ಲ ಸರಿದವಳು
ಕಣ್ಣೊಳಗಣ ಕವನವಾದವಳು
ನಾಳೆ ಬರುವಳೋ ಹೇಗೆ
ನಗುವ ಮೊಳಕೆಗೆ ನೀರುಣಿಸಲು
ಆ ನನ್ನ ಪ್ರೇಯಸಿ?

December 5, 2007

ಬೆಳದಿಂಗಳಾಯ್ತು ನೋಡಾ ಬೆಳಕಿನ ಹಬ್ಬ

ಬಿಸಿಲಿಲ್ಲದೆ ಬಿಸಿಲ ಕಂಪನ್ನಷ್ಟೆ ಹೊಮ್ಮಿಸಿದ್ದ ಸುಂದರ ಮಧ್ಯಾಹ್ನಕ್ಕೆ ಸಂಜೆಯ ನವಿರು ನೆರೆಯುತ್ತಲಿತ್ತು. ಸಂಜೆ ಆವರಿಸುತ್ತಿದ್ದ ಐದು ಗಂಟೆಯ ಸಮಯ.(ಶನಿವಾರ , December 1, 5:00PM) Californiaದ Sunnyvale Cityಯ Fairoaks Parkನ Community Centre ಹೊಕ್ಕುತ್ತಿದ್ದಂತೆ ನವವಸ್ತ್ರ(ಭಾರತೀಯ ಉಡುಗೆ) ಧರಿಸಿದ ವ್ಯಕ್ತಿಗಳು Parkನ ಆವರಣದಲ್ಲಿ ಸಂಭ್ರಮದಿಂದ ತಮ್ಮ Car ಹೊತ್ತು ತಂದಿದ್ದ ಸಾಮಾನು ಸರಂಜಾಮುಗಳನ್ನು Community Centre ಒಳಗಡೆ ಸಾಗಿಸುತ್ತಿದ್ದುದು ಸಂಭ್ರಮದ ಸುವಾಸನೆಯ ಸ್ವಾಗತ ಸೂಸುತ್ತಿತ್ತು. ಒಳಗಡಿ ಇಡುವ ಮೊದಲು ಕಾರ್ಯಕ್ರಮ ನಡೆಯಲಿದ್ದ Hallನ ಸುತ್ತಲೂ ದೇವೀಪಾದ, ಕಳಶ, ಸ್ವಸ್ತಿಕ್, ದೀಪಾಲಂಕಾರದ ರಂಗೋಲೆ ಚಿತ್ತಾರಗಳು ಅತಿಥಿಗಳನ್ನೆಲ್ಲಾ ಸ್ವಾಗತಿಸಿ ಒಳಬಿಟ್ಟವು. ಒಳ ಹೊಕ್ಕರೆ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ನೂರೈವತ್ತಕ್ಕೂ ಮೀರಿದ ಸದಸ್ಯರೆಲ್ಲಾ ಒಬ್ಬೊಬ್ಬರೂ ಒಂದೊಂದು ಕಾರ್ಯದಲ್ಲಿ ನಿರತರಾಗಿದ್ದು ಕುಟುಂಬದ ಒಗ್ಗಟ್ಟಿಗೆ ಮಾದರಿಯಾಗಿತ್ತು. ರಂಗುರಂಗಿನ ಹೊಸಬಟ್ಟೆ ತೊಟ್ಟ ಎಲ್ಲ ವದನಗಳಲ್ಲಿಯೂ ದೀಪಾವಳಿಯ ರಂಗು ಹೊರಹೊಮ್ಮುತ್ತಿತ್ತು. ಹಚ್ಚಿಟ್ಟ ಹಣತೆಗಳಂತೆ ಮಕ್ಕಳೆಲ್ಲ ಕುಳಿತಲ್ಲೆ ಕುಣಿಯುತ್ತ ಖುಷಿಯಲ್ಲಿದ್ದರು. ಹಬ್ಬಕ್ಕೆ ಇನ್ನಷ್ಟು ರಂಗು ಭರಿಸುವ ಸಲುವಾಗಿ ಮಕ್ಕಳಿಗೆಲ್ಲಾ ಬಿಳಿ ಹಾಳೆಯ ಮೇಲಿನ ಚಿತ್ರಕ್ಕೆ ಬಣ್ಣಬಳಿಯುವ ಕೆಲಸ ನೀಡಿ ಕಾರ್ಯನಿರತರಾಗುವಂತೆ ಮಾಡಲಾಗಿದ್ದರಿಂದ ಚಿಣ್ಣರೆಲ್ಲಾ ಮುದದಿಂದ ಬಣ್ಣದ ಲೋಕದಲ್ಲಿ ವಿಹರಿಸುತ್ತಿದ್ದರು.

ಎದುರಿಗಿನ ಭಿತ್ತಿಯ ಮಧ್ಯದಲ್ಲಿ ಅಕ್ಕಿ, ರವಾ, ಬಿಳಿ ಮತ್ತು ಕಪ್ಪು ಎಳ್ಳು, ಸಬ್ಬಕ್ಕಿ, ಹೆಸರುಬೇಳೆ, ಹೆಸರುಕಾಳು, ಮೆಂತ್ಯದಕಾಳುಗಳಿಂದ ಉದ್ಭವಳಾದ ಶ್ರೀಲಕ್ಷ್ಮಿದೇವಿಯು ಶ್ರೀಮತಿ ಮೀರಾ ಹೆಗಡೆಯವರ ಹಸ್ತದಿಂದ ಉದಯಿಸಿದ್ದು, ಕಬ್ಬಿನಗಿಡಗಳ ನಡುವೆ ಸರ್ವರನ್ನೂ ಆಶೀರ್ವದಿಸುತ್ತಾ ಎಲ್ಲರ ಕಣ್ಮನ ಸೆಳೆಯುತ್ತ ನಗುತ್ತಲಿದ್ದಳು. ದೇವಿಯ ಸುತ್ತ ನೀರಿನಲ್ಲಿ ಈಜುತ್ತಿದ್ದ ದೀಪಗಳು ಎಲ್ಲರ ನಯನಗಳಲ್ಲಿ ಹೊಳೆದು ಸುತ್ತ ದೀಪಾವಳಿಯ ಬೆಳಕನ್ನು ಬೀರಿದವು. ಈ ಎಲ್ಲ ದೀಪಗಳ ಸುತ್ತ ನಲಿಯುತ್ತಿದ್ದ ಬಣ್ಣದ ರಂಗೋಲೆ ಹಬ್ಬಕ್ಕೆ ಕಳೆಯಾಗಿತ್ತು.
ಶ್ರೀ ಶಿವರಾಮ ಭಟ್’ರವರು ಪುರೋಹಿತರಾಗಿ "ನಮಸ್ತೇಸ್ತು ಮಹಮಾಯೇ ಶ್ರೀಪೀಠೇ ಸುರಪೂಜಿತೆ" ಎಂದು ದೇವಿಯನ್ನು ಮಂತ್ರ-ಶ್ಲೋಕಾದಿಗಳಿಂದ ಪೂಜಿಸಿದಾಗ ಬಾಂಧವರೆಲ್ಲಾ ಭಕ್ತಾದಿಗಳಾಗಿ ಕರಮುಗಿದು ನಿಂತರು. ‘ಸ್ವಾಮಿ ದೇವನೆ ಲೋಕಪಾಲನೇ’ ಎಂಬುದಾಗಿ ಭಜಿಸಿದ ಮಾತೆಯರ ಕಂಠಗಳಿಗೆ ಬಾಂಧವರೆಲ್ಲರೂ ಧ್ವನಿಯಾಗಿ ಭಜಿಸಿ ಕೊನೆಯಲ್ಲಿ ‘ರಾಮ.. ರಾಮಾ..ಎನ್ನಿರೋ...’ ಎಂಬ ಭಜನೆಯಲ್ಲಿ ರಾಮನನ್ನು ನೆನೆದು ಭಜನೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಅಧ್ಯಕ್ಷ ಶ್ರೀ ವಿಶ್ವನಾಥ ಹೆಗಡೆಯವರು ದೀಪಾವಳಿಯನ್ನು ಆಚರಿಸಲು ಆಗಮಿಸಿದ ಹವ್ಯಕ ಬಾಂಧವರಿಗೆಲ್ಲಾ ಅತಿಥೇಯ "ದಿವ್ಯಜ್ಯೋತಿ" ಬಳಗದ ಪರವಾಗಿ ಆದರದ ಸ್ವಾಗತ ಕೋರಿದ್ದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ನಂತರ ಶ್ರೀ ಗಿರೀಶ ಹೆಗಡೆಯವರ ನಿರ್ವಹಣೆಯಲ್ಲಿ ಚಿಗುರಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ದಿವ್ಯಜ್ಯೋತಿ" ಬಳಗದ ಸಪ್ತಜ್ಯೋತಿಯರು ‘ದೇವೀ.. ಭಾಗ್ಯದಾತೆ’ಎನ್ನುತ್ತ ದೇವಿಯನ್ನು ಸ್ತುತಿಸಿದ ಮರುಕ್ಷಣದಲ್ಲಿ ತೇಲಿಬಂದ ಅದೇ ಬಳಗದ ಚಿಣ್ಣಾರಿಗಳ ಸಪ್ತಸ್ವರಗಳು ಒಂದಾಗಿ ‘ಜ್ಯೋತಿ ಬೆಳಗುತಿದೇ..’ಎಂದು ಹಾಡಿದ ಬೆಳಕಿನ ಹಾಡನ್ನು ಆಲಿಸುತ್ತಾ ಪುಟಾಣಿಗಳೆಲ್ಲಾ ಬಣ್ಣದ ಲೋಕದಿಂದಿಳಿದು ಬಂದು ತಮ್ಮ ತಾಯ್ತಂದೆಯರ ಸಮ್ಮುಖದಲ್ಲಿ ದೇವಿಯ ಮುಂದೆ ಒಬ್ಬೊಬ್ಬರಾಗಿ ಜ್ಯೋತಿ ಬೆಳಗಿಸಿದಾಗ ನೂರು ದೀಪಗಳೆಲ್ಲಾ ಒಂದಾಗಿ ಉಜ್ವಲ ಬೆಳಕ ಚೆಲ್ಲಿದವು.
ಚಂದನ್, ಶ್ರೇಯ, ಐಶ್ವರ್ಯ, ಸ್ನೇಹ, ಅನಿಶಾರೆಂಬ ಪಂಚ ಪುಟಾಣಿಗಳು ಅಧ್ಬುತವಾಗಿ ಮುದ್ದುಮಾತುಗಳಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ ನೀಡುವಾಗ ಬಾಂಧವರೆಲ್ಲಾ ಮೂಕರಾಗಿ ಕರ್ಣಗಳಿಗೆ ಕೆಲಸ ಕೊಟ್ಟರು. ಕೃತಿಕಾ ಹಾಗೂ ಪ್ರಕೃತಿಯರು ನರ್ತಿಸಿದ ಭರತನಾಟ್ಯ ಹಾಗೂ ಕಥಕ್ ಶೈಲಿಯ ನಾಟ್ಯವು ನೋಡುಗರ ಕಣ್ಮನ ಸೆಳೆಯಿತು. ‘ಬಾರಾ..ಬಾರಾ..’ ಎಂಬ ಹಾಡಿಗೆ ಚಿಕ್ಕದಾದ ರಂಗಸ್ಥಳಕ್ಕೆ ಹೊಂದಿಕೊಂಡು ಹೆಜ್ಜೆಹಾಕಿದ ಈ ಪುಟಾಣಿಗಳ ನೃತ್ಯ ಪ್ರಶಂಸನೀಯ. ಪ್ರಣವ್, ಅಂಜಲಿ, ವಿಕಾಸ್’ರ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ರಸವತ್ತಾಗಿ ಮೂಡುತ್ತಿದ್ದಂತೆ ಇತ್ತ ಅತಿಥೇಯ ಗೃಹಿಣಿಯರಿಂದ ಭೋಜನದ ಸಿದ್ಧತೆ ನಡೆದಿತ್ತು. ಬೆಳಕಿನ ಹಬ್ಬದಲ್ಲಿ ಉಪಸ್ಥಿತರಿದ್ದ ಎಲ್ಲ ಮಾತೆಯರ ರುಚಿ ರುಚಿಯ, ವಿಧವಿಧದ ಭಕ್ಷ್ಯಗಳು ಅಂಗಿತೊಟ್ಟ ಮೇಜನ್ನು ರಂಗಾಗಿ ಶೃಂಗರಿಸಿದ್ದವು. ಅನ್ನಪೂರ್ಣೆಯರ ಕೈಗಳು ಅಕ್ಕಿ ತೊಳೆಯುತ್ತಿದ್ದರೆ, ಕಣ್ಣುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವಲೋಕಿಸಿದವು.
ಇತ್ತ ಅಂಜಲಿ, ಅನನ್ಯ, ಪ್ರಕೃತಿ, ಕೃತಿಕಾರವರು ಪ್ರೇಕ್ಷಕರ ಕಣ್ಮನ ಸೆಳೆಯುತ್ತ ಹಿಮಾಚಲಪ್ರದೇಶಕ್ಕೆ ಕರೆದೊಯ್ಯುತ್ತಿದ್ದಂತೆ ಇತ್ತ ಮಲ್ಲಿಗೆಯ ಅನ್ನ ಬೆಳ್ಳನೆಯ ನಗೆಸೂಸಿ ಅರಳುತ್ತಲಿತ್ತು .ಅಂಕಿತಳ ಚಂದದ ತೊಂಡೆಕಾಯಿ-ಬೆಂಡೆಕಾಯಿಯ ಹಾಡನ್ನಾಲಿಸಿದ ಹಿಂದೆಯೇ ‘ಸೊಂಟದ ಮೇಲೆ ಕೈಯಿಟ್ಟುಕೊಂಡು’ ಎಂಬ ಹಾಡಿಗೆ ಜನಪದ ಮತ್ತು ಪಾಶ್ಚಾತ್ಯಗಳೆರಡೂ ಮಿಶ್ರಗೊಂಡ ಶೈಲಿಯಲ್ಲಿ ಐಶ್ವರ್ಯ ಮತ್ತು ಶ್ರೇಯ ಎಲ್ಲರೂ ಮೂಗಿನ ಮೇಲೆ ಬೆರೆಳಿಟ್ಟುಕೊಳ್ಳುವಂತೆ ನರ್ತಿಸಿ ಮುಗಿಸಿದಾಗ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದಾಯ ಹೇಳುವ ಸಮಯವಾಗಿತ್ತು. ಪೂರ್ವಸಿದ್ಧತೆಯೊಂದಿಗೆ ಉತ್ಸುಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗಿದ್ದ ಕೆಲವು ಪುಟಾಣಿಗಳ ಕಾರ್ಯಕ್ರಮ ರದ್ದಾಗಿದ್ದು ಸಮಯದ ಅಭಾವದಿಂದ ಎಂಬುದು ವಿಷಾದದ ಸಂಗತಿ.
ಹಬ್ಬದ ವಿಶೇಷತೆಗಳಲ್ಲಿ ಒಂದಾಗಿ ಎಲ್ಲರ ಬಾಯಲ್ಲಿ ನಿಂತ ವೀಷಯವೆಂದರೆ ಶ್ರೀ ರಾಮಚಂದ್ರ ಸ್ವಾಮೀಜಿಯವರ ಸಾಧನೆಯ ಪ್ರದರ್ಶನ! ಮನುಷ್ಯನ ಯಾವುದಾದರೊಂದು ಅಂಗವನ್ನು ನಿರ್ಜೀವಗೊಳಿಸಿ, ಪುನಃ ಅಸ್ತಿತ್ವಕ್ಕೆ ತರುವಂಥಹ ಅವರ ಸಾಧನೆ ಸೇರಿದವರನ್ನೆಲ್ಲಾ ಬೆರಗುಗೊಳಿಸಿ ಆ ಸ್ಥಳವನ್ನೊಮ್ಮೆ ಸ್ತಬ್ಧಗೊಳಿಸಿತು.

ತದನಂತರದಲ್ಲಿ Bay-Areaಗೆ ಹೊಸದಾಗಿ ಆಗಮಿಸಿದ ಅಪರಿಚಿತ ಹವ್ಯಕ ಮುಖಗಳೆಲ್ಲಾ ಮುಂದಾಗಿ ತಮ್ಮ ಪರಿಚಯ ಅರುಹಿ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ಬಾಂಧವರಾಗುತ್ತಿದ್ದಂತೆ ಬೋಜನಕ್ಕೆ ಸಿದ್ಧವಾಗಿ ವಿರಾಜಿಸುತ್ತಿದ್ದ ಭಕ್ಷಗಳೆಲ್ಲ ಬಂಧುಗಳನ್ನು ಕೈ ಬೀಸಿ ಕರೆದವು. ಸೇರಿದವರ ಅರ್ಧ ಹೊಟ್ಟೆ ತುಂಬುತ್ತಿದ್ದಂತೆಯೇ ಬಾಯಿಚಪ್ಪರಿಸುವಂತಿದ್ದ ಭಕ್ಷಗಳ ಪಾತ್ರೆಗಳು ಖಾಲಿಹುಟ್ಟು ತೋರಿಸಿದರೆ,ಚಪಾತಿ, ಅನ್ನ, ತಂಬುಳಿ, ಸಾಂಬಾರ್’ಗಳು ಎಲ್ಲರನ್ನು ತಮ್ಮೆಡೆಗೆ ಸೆಳೆದವು. ಮೈಸೂರುಪಾಕ್ ಮತ್ತು ಕ್ಯಾರಟ್ ಖೀರುಗಳು ಮಾತ್ರ ಭೋಜನಾಂತ್ಯದವರೆಗೂ ನೆಲೆಯಾಗಿ ನಿಂತು ಎಲ್ಲರ ಮನವನ್ನು ಸಿಹಿಯಾಗಿಸಿದವು.
ಚದುರಿಕೊಂಡಿದ್ದ ಭೋಜನಪಂಕ್ತಿಯೊಳಗಿಂದ ಗ್ರಂಥಗಳು ತೇಲಿಬಂದು ‘ಭೋಜನಕಾಲೇ ಸೀತಾಕಾಂತಸ್ಮರಣ’ ಎಂದಾಗ ಎಲ್ಲರೂ ಒಕ್ಕೊರಲಿನಿಂದ ‘ಜೈ ಜೈ ರಾಮ್’ ಎಂದು ಧ್ವನಿ ಸೇರಿಸಿದರು.
ಈ ಎಲ್ಲ ಗಳಿಗೆಗಳಲ್ಲಿ ಪೀಠದ ಮೇಲಿದ್ದ ಧಾನ್ಯಲಕ್ಷ್ಮಿಯು ಮನುಜಕುಲವನ್ನೆಲ್ಲಾ ಆಶೀರ್ವದಿಸುತ್ತಾ ಸುತ್ತ ಧಾನ್ಯಗಳ ಸುರಿಸುವಂತೆ, ನಗುವಿನ ಹೊಂಬೆಳಕ ಬೀರಿದಂತೆ ತೋರುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಬೀಳ್ಕೊಡುತ್ತಿದ್ದ ಬಾಂಧವರನ್ನು ೨೦೦೭ನೇ ಸಾಲಿನ ಹವ್ಯಕ ದೀಪಾವಳಿಯು ೨೦೦೮ನೇ ಸಾಲಿನ ಹವ್ಯಕ ಸಂಕ್ರಾಂತಿಗೆ ಶ್ರೀ ಗೋಪಾಲ ಭಟ್’ರವರ ಕಂಠದಿಂದ ಆಮಂತ್ರಣ ಕೋರಿತು. ಸಂಕ್ರಾಂತಿಯ ನಿರೀಕ್ಷೆಯಲ್ಲಿ ದೀಪಾವಳಿಗೆ ವಿದಾಯ ಹೇಳುತ್ತಾ ಒಬ್ಬೊಬ್ಬರಾಗಿ ಮನೆಯತ್ತ ಮರಳುತ್ತಿದ್ದರೂ ಹವ್ಯಕ ಭಾಷೆಯ ಸೊಗಡು ಹತ್ತುದಿಕ್ಕಿನಿಂದ ಬಂದ ನೂರೈವತ್ತು ಜನರಲ್ಲಿ ಆತ್ಮೀಯತೆಯನಿತ್ತ ಬೆಸೆದಿತ್ತು. ಸರ್ವ ಹವ್ಯಕ ಬಾಂಧವರಿಂದ ಸಾಂಗೋಪಸಾಂಗವಾಗಿ ಜರುಗಿದ ದೀಪಾವಳಿಯನ್ನು ಮೆಲುಕುಹಾಕುತ್ತ, ಯಶಸ್ಸಿಗೆ ಕಾರಣವಾದ ಎಲ್ಲ ಹಸ್ತಗಳು ಹಸ್ತ ಕೂಡಿಸಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸಿ ‘ದಿವ್ಯಜ್ಯೋತಿ’ ಬಳಗ hallನಿಂದ ಹೊರಬಂದಾಗ ಬೆಳಕಿನ ಹಬ್ಬವೇ ಸುತ್ತ ಬೆಳದಿಂಗಳಾದಂತೆ, ಮೇಲೆ ನಕ್ಷತ್ರಗಳು ಸಂಕ್ರಾಂತಿ ಬೀರಲಿರುವ ಬಿಳಿಎಳ್ಳಿನಂತೆ ಆಗಸದಲ್ಲಿ ನಗುತ್ತ ಶುಭಕೋರಿದವು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.