December 20, 2008

ಕೊನೆಯ ಕನಸಿಗೊಂದು ನಮನ

ಕನಸಿನಂಗಡಿಯೊಡತಿ ನಾನು
ನನಗೆ ಲಾಭ ನಷ್ಟವಿಲ್ಲ
ಬಿದ್ದರೆ ಒಡೆಯುವವು
ಬೆಳೆಸಿದರೆ ಬೆಳೆವವು
ಬಿದ್ದು- ಬೆಳೆಯುವ ನಡುವೆ ಲಾಭನಷ್ಟವೆಲ್ಲ


ಕೊಳುವಾಗ ಕನಸುಗಳ
ಬೆಲೆಯ ಕೇಳುವುದಿಲ್ಲ
ಮಾರಿಬಂದ ಲಾಭಕ್ಕೆ
ಮಾರುಹೋಗುವುದಿಲ್ಲ
ಕೊಡು-ಕೊಳುಗಳ ನಡುವೆ ಲಾಭನಷ್ಟವೆಲ್ಲ

ಸತ್ತರೀ ಕನಸುಗಳು
ನೆನಪಾಗಿ ಬರುವವು
ಬೆಳೆಯುತಲಿ ಬದುಕಿದರೆ
ನನಸಾಗಿ ನಲಿಯುವವು
ನೆನಪು-ನನಸುಗಳ ನಡುವೆ ಲಾಭನಷ್ಟವೆಲ್ಲ

ನೆನಪು ಕನಸುಗಳ ನಡುವೆ ಲಾಭ ನಷ್ಟವಿಲ್ಲ

ಕನಸುಗಳ ಹುಗಿಯೆ
ಘೋರಿಯಾಯ್ತದುವೆ
ಸುಟ್ಟರೆ ಕಟ್ಟಿಗೆಯಡಿ
ಸುಡುಬೂದಿಯಾಯ್ತು
ಸುಟ್ಟು-ಹುಗಿಯುವ ನಡುವೆ ಲಾಭನಷ್ಟವೆಲ್ಲ

ನಾನು ಅಂಗಡಿಯ ಒಡತಿ
ಕನಸ ಕಾಣುವುದನಿವಾರ್ಯ
ಅಂಗಡಿಯಿದಿರು ನನ್ನಂತ ನೂರುಜನ
ಇಕೋ ಕೊಳ್ಳಿ ಕನಸುಗಳ
ಕನಸ ಕಾಣುವರಿಗೆಂದೂ ಲಾಭನಷ್ಟವಿಲ್ಲ

December 5, 2008

ಒಗ್ಗಟ್ಟಿಗೆ ಬಲವಿದೆಯೇ?

ಪ್ರಿಯ ಸಹ ಬ್ಲಾಗಿಗರೇ...
‘ನೀಲಾಂಜಲ’ ಕರೆಗೆ ಓಗೊಟ್ಟು ನೀವೂ ನಿಮ್ಮ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿದ್ದೀರ? ಹಾಗಾದರೆ ನಮ್ಮ ಈ ಆಂದೋಲನದ ಒಗ್ಗಟ್ಟಿನ ಬಲದ ಸಾಕ್ಷಿಗಾಗಿ ನೀಲಾಂಜಲದಲ್ಲೊಂದು ‘ನಾನೂ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪಾಗಿಸಿದ್ದೇನೆ’ ಎಂಬೊಂದು ಮಾತಿನ ಪ್ರತಿಕ್ರಿಯೆ ನೀಡಿ ಒಗ್ಗಟ್ಟಿನ ಬಲವನ್ನು ಹೆಚ್ಚಿಸಿ. ನಮ್ಮ ಒಗ್ಗಟ್ಟಿಗೆ ನಾವೇ ಸಾಕ್ಷಿಯಾಗೋಣ.

ಎಲ್ಲರಿಗೂ ವಂದನೆ.

November 20, 2008

ಒಡಂಬಡಿಕೆ

ಅದೊಂದು ಚಂದದ ಗಳಿಗೆ. ಆ ಸುಸಂದರ್ಭವೆಂದರೆ ಶ್ರೀ ಜಿ. ಜಿ.ಹೆಗಡೆ, ಕೋಡಗದ್ದೆ ಇವರ ಪರಿಚಯವಾಯ್ತು. ಮಾತಿನ ಮಧ್ಯೆ ಜಿ.ಜಿ.ಹೆಗಡೆಯವರು ಹೇಳಿದರು ‘ಆನೂ ಒಂದು ಪುಸ್ತಕ ಬರಕಂಜಿ’ (ನಾನೊಂದು ಪುಸ್ತಕ ಬರೆದಿಟ್ಟುಕೊಂಡಿದ್ದೇನೆ) . ಆ ಸರಳತೆಯೊಳಗೆ ಕಳೆದುಹೋದೆ.

‘ಇಲ್ಲಿ ಟೈಂ ಪಾಸ್ ಆಗುವುದು ಕಷ್ಟ’ ಎಂದರು. ‘ನನ್ನಲ್ಲಿ ಕೆಲವು ಪುಸ್ತಕಗಳಿವೆ, ಅವೆಲ್ಲ ಬಹುಷಃ ನೀವು ಓದಿದವುಗಳೇ ಆಗಿರಲಿಕ್ಕೆ ಸಾಕು’ ಅಂದೆ. ಇಲ್ಲ, ನಾಲ್ಕಾರು ವರ್ಷಗಳಿಂದೀಚೆಗೆ ಬಂದ ಪುಸ್ತಕಗಳನ್ನ ಓದಲಾಗಿರಲಿಲ್ಲ’ ಎಂದರು. ಮಾತು ಹೀಗೆಯೇ ಅರಳಿಕೊಳ್ಳುತ್ತ ವಸುಧೇಂದ್ರರ ತನಕ ಬಂದು ನಿಂತಿತು.

ಈ ಸಲ ಭಾರತಕ್ಕೆ ಬಂದಾಗ ಸಂದೀಪ ಗಿಫ್ಟಿಸಿದ್ದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುಧೇಂದ್ರರ ಲಲಿತ ಪ್ರಬಂಧಗಳ ನೆನಪಾಯ್ತು. ಆ ಪುಸ್ತಕವನ್ನ ಉಡುಗೊರೆ ಕೊಡುವ ಮುನ್ನ ಸಂದೀಪ ಕೇಳಿದ್ದ ‘ನೀ ವಸುಧೇಂದ್ರ ಅವರನ್ನ ಓದಿದ್ಯಾ?’

‘ಇಲ್ಲೆ, ಹಂಗಂದ್ರೆ ಯಾರು?’ ಅಂತ ಕೇಳಿದ್ದೆ ಯಾವತ್ತಿನದೇ ಪೆದ್ದುತನದಲ್ಲಿ.

‘ಇದನ್ನ ಓದು, ಚೊಲೊ ಇದ್ದು’ ಅಂತ ಕೊಟ್ಟ। ಮುಖಪುಟ ಎಲ್ಲೋ ನೋಡಿದೀನಿ ಅನ್ನಿಸ್ತು। ತಕ್ಷಣ ನೆನಪಿಗೆ ಬಂತು ‘ನನ್ನ ಬ್ಲಾಗ್ ಪ್ರೊಫೈಲ್ ಫೋಟೋ ಇದೇ ಥರಹವೇ ಇದೆ’ ಅಂತ। ಆ ಪುಸ್ತಕದ ಮುಖಪುಟದಲ್ಲಿ ಅಮ್ಮನ ಕೈ ಮತ್ತು ಪಾಪುನ ಕಾಲು ಇತ್ತು। ನನ್ನ ಬ್ಲಾಗ್ ಪ್ರೊಫೈಲ್ ಅಲ್ಲಿರೋ ಫೊಟೋ ಅಲ್ಲಿ ಪಾಪುನ ಕಾಲು ಮಾತ್ರ ಇದೆ। ಕಣ್ಣಗಲಿಸಿ, ಹಲ್ಕಿರಿದು ‘ಎಷ್ಟ್ ಚೊಲೋ ಇದ್ದಲಾ....’ ಅಂದೆ। ಅದ್ಕೇ ಕೊಟ್ಟಿದ್ದು ಅಂದ। ಸಂದೀಪನಿಗೆ ಥ್ಯಾಂಕ್ಸ್ ಹೇಳಿದ್ನೋ ಬಿಟ್ನೋ ಮರ್ತಿದೀನಿ। ಆ ಪುಸ್ತಕವನ್ನ ಓದಿಯಾದ್ಮೇಲೆ ಸಂದೀಪನಿಗೆ ಥ್ಯಾಂಕ್ಸ್ ಹೇಳಲೇಬೇಕು ಎನ್ನಿಸಿತ್ತು.

ಆವತ್ತು ಸಂಜೆ ಗಾಂಧೀಬಾಜಾರ್ ಅಲ್ಲಿ ‘ಅಂಕಿತ’ ಹೊಕ್ಕಿದ್ದಾಗ ‘ಯುಗಾದಿ’ ‘ಚೇಳು’ ಎಲ್ಲ ತಗೊಂಡು ಮರುದಿನ ಯುಗಾದಿ ಹಬ್ಬ ಇದೆ ಅಂತ ಊರಿಗೆ ಬಂದಿದ್ದೆಲ್ಲ ನೆನಪಾಗಿ ‘ಮಾವಾ...ನನ್ ಹತ್ರ ಯುಗಾದಿ, ಚೇಳು ಎಲ್ಲ ಇದ್ದು, ನಿಮಗೆ ಕೊಡ್ತಿ ನಾನು’ ಅಂದೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ ನಂಗೂ ತುಂಬಾ ಇಷ್ಟ, ನೀವು ಓದಿ ನೋಡಿ ನಿಮಗೂ ಇಷ್ಟ ಆಗ್ತು’ ಅಂದಿದ್ದೆ.

ಇವತ್ತು ಮತ್ತೆ ಅವರನ್ನ ಭೇಟಿಯಾಗಿದ್ದೆ। ‘ವಿಚಿತ್ರಾನ್ನ’ ಪುಸ್ತಕದ ಹಾಳೆ ತಿರುವುತ್ತ ‘ವಿಜಯ ಕರ್ನಾಟಕದಲ್ಲಿ ಜೋಶಿಯವರ ಅಂಕಣ ಓದ್ತಿ ನಾನು’ ಅಂದ್ರು. ‘ಇವತ್ತು ಸಾಹಿತ್ಯದ ಬಗ್ಗೆ ಮಾತಾಡುತ್ತಿದ್ದರೆ ಕೇಳಲು ಪುರುಸೊತ್ತು ಸಿಗದಿರುವಂಥಹ ವೃತ್ತಿಯಲ್ಲಿದ್ದೂ ಇವರೆಲ್ಲ ಪುಸ್ತಕ ಬರೆದು ಸಾಧಿಸಿದ್ದಾರಲ್ಲ’ ಅಂತ ಖುಷಿಪಟ್ಟರು ಜಿ.ಜಿ.ಹೆಗಡೆಯವರು. ನಿಜ, ಆಸಕ್ತಿಯಿರುವಲ್ಲಿ ಸಮಯ ತಾನಾಗೇ ಹೊಂದಿಕೊಳ್ಳುತ್ತದೆ ಎನ್ನಿಸಿತು. ‘ಯಾವುದೇ ವಿಷಯದ ಬಗ್ಗೆ ಒಲವು, ಆಸಕ್ತಿ ಇದ್ರಷ್ಟೇ ಇವೆಲ್ಲ ಸಾಧ್ಯ’ ಅಂತ ಹೇಳಿದ ಜಿ.ಜಿ.ಹೆಗಡೆಯವರ ಮಾತು ಅದೆಷ್ಟು ಸತ್ಯ ಎನ್ನಿಸಿತು.

‘ಮಂಕುತಿಂಮನ ಕಗ್ಗ’ ಗಳಲ್ಲೊಂದಿಷ್ಟನ್ನು ತಮ್ಮ ಕೈಯ್ಯಾರೆ ಟೈಪಿಸಿ, ಪ್ರಿಂಟ್ ಔಟ್ ತೆಗೆದುಕೊಟ್ಟರು. ಅತ್ತೆ(ಜಿ।ಜಿ।ಹೆಗಡೆಯವರ ಪತ್ನಿ) ಯವರು ಕೊಟ್ಟ ರುಚಿಯಾದ ಖೀರನ್ನು ನಾನು ಸವಿಯುತ್ತಲಿದ್ದರೆ ಮಾವ(ಜಿ.ಜಿ.ಹೆಗಡೆಯವರು) ರಾಗವಾಗಿ ಕಗ್ಗವನ್ನು ಹೇಗೆ ಹಾಡಿಕೊಂಡರೆ ನಾಲಿಗೆಯಲ್ಲಿಯೇ ಉಳಿದೀತು ಅಂತ ತೋರಿಸುತ್ತಿದ್ದರೆ ನನ್ನ ನಾಲಿಗೆಯಲ್ಲಿದ್ದ ರುಚಿ ಖೀರಿನದೋ ಅಥವಾ ಕಗ್ಗದ್ದೋ ಗೊತ್ತಾಗಲಿಲ್ಲ.

ಬರುವಾಗ ಜಿ.ಜಿ.ಹೆಗಡೆಯವರು ತಮ್ಮ ಕವನ ಸಂಕಲನದ ಪ್ರತಿಯೊಂದನ್ನು ಕೈಗಿತ್ತರು. ಮತ್ತೆ ಯಾವತ್ತಿನಂಗೆ ಕಣ್ಣಗಲಿಸಿ ಹಲ್ಕಿರಿದು ‘ಥ್ಯಾಂಕ್ ಯೂ’ ಅಂದೆ. ‘ಆವರಣ’ ಹಾಗೂ ‘ಜಯಂತ ಕಾಯ್ಕಿಣಿ ಕಥೆಗಳು’ ಇವೆರಡನ್ನು ಅವರಿಗೆ ಓದುವುದಕ್ಕೋಸಕರ ಕೊಟ್ಟು, ಎಲ್ಲರಿಗೂ ಟಾಟಾ ಹೇಳಿ ಅವರ ಮನೆಯಿಂದ ಹೊರಟಿದ್ದೆ. ದಾರಿಯಲ್ಲಿಯೇ ಅವರ ಕವನ ಸಂಕಲನ ತೆರೆದು ಓದಲಾರಂಭಿಸಿದ್ದೆ. ಸ್ಟ್ರೀಟ್ ಲೈಟ್ ಎದುರುಬಂದಾಗೆಲ್ಲ ಸರಸರನೆ ಓದಿಕೊಂಡು ಕತ್ತಲು ಬೆಳಕಿನಾಟದಲ್ಲಿ ಎರಡು ಕವನ ಓದುವಷ್ಟರಲ್ಲಿ ಮನೆ ತಲುಪಿದ್ದೆವು. ನನ್ನವನು ‘ಮನೆ ಬಂತು, ಇಳಿ ’ ಅಂದ. ‘ಇವತ್ತು ಈ ಕವನ ಪುಸ್ತಕ ನಂಗೆ ಕೊಡು, ನಾನು ಬೇಗ ಓದಿ ಮುಗ್ಸಿ ನಾಳೆ ನಿಂಗೆ ಕೊಡ್ತಿ’ ಅಂದವನ ಮಾತಿಗೆ ದುರುಗುಟ್ಟಿ ಅವನ ನೋಡಿದ್ದೇ ಉತ್ತರ. ‘ನೀನಿವತ್ತು ಇದನ್ನ ಓದು’ ಅಂತ ಬೇರೊಂದು ಚಂದದ ಪುಸ್ತಕವನ್ನ ಅವನಿಗೆ ಹಿಡಿಸಿ ಇಲ್ಲಿ ಬಂದು ಒಬ್ಬಳೇ ಕುಳಿತು ಜಿ.ಜಿ.ಹೆಗಡೆಯವರ ಚಂದದ ಕವನಗಳನ್ನ ಓದ್ತಾ ಇದ್ರೆ ಯಾಕೋ ಅವುಗಳನ್ನ ನಾನೊಬ್ಬಳೆ ಓದೋಕೆ ಮನಸಾಗ್ಲಿಲ್ಲ. ಒಂದು ಕವನವನ್ನು ನೀವುಗಳೂ ನನ್ನೊಡನೆ ಓದಿ ಸವಿಯಲಿ ಎನ್ನಿಸಿತು. ಕವನ ಸಂಕಲನದ ಶೀರ್ಷಿಕೆ ಏನಂತ ಕೇಳಿದ್ರಾ? ಒಡಂಬಡಿಕೆ . ಅದರೊಳಿಗಿಂದ ಈ ಒಂದು ಕವನ ನಿಮ್ಮೆಲ್ಲರಿಗಾಗಿ.

ಸಮರಸ

ಎಲ್ಲರಂತೆಯೆ ನೀನಿರು ಎಲ್ಲರೊಳಗೊಂದಾಗಿರು

ಬಲ್ಲೆನೆಲ್ಲವನೆಂಬ ಗರ್ವದ ಗುಲ್ಲುಸಲ್ಲದು ನಿಷ್ಠುರ

ನಿನ್ನ ಭಿನ್ನತೆ ಇನ್ನು ಅಧಿಕತೆ

ಭೇದ ಮೆರೆಸುವುದೇತಕೆ?

ಸುಖದ ಆಶಯ ಕೀರ್ತಿ ಹಂಬಲ

ಸಿರಿಪದದ ಪಟ್ಟಕೆ ಕಾತರ

ಪ್ರೀತಿಯಪ್ಪುಗೆ ಪ್ರೇಮ ವರ್ಷಕೆ

ಮಮತೆ ಹೃದಯದ ವಿಕಸನ

ಒಲವು ಹಲಬಗೆ ಚಲವು ತಿಳಿದೊಡೆ

ಗೆಲವು ಲೋಕಕೆ ಸಂಭ್ರಮ

ಮುಗಿಲಗಣ್ಣಿನ ಧಾರೆ ಧುಮುಕದೆ

ನೆಲದ ಎದೆಗುದಿ ಸ್ಪಂದನ

ಹರಿವ ನದಿ ತೊರೆ ತೆರದಿ ಬದುಕಿನ

ಜೀವವಾಹಿನಿ ಧಾವನ

ಹುಟ್ಟುಸಾವಿನ ಸತ್ಯ ಶೋಧನೆ

ಮುಟ್ಟು ಕೊನೆ ಪರ್ಯಂತರ

ಉಗಮಕೆಡೆಯದೊ ಪೂರ್ವದಾರ್ಜಿತ

ಜಗವೆ ಚೇತನ ನಿಗಮವು

*****************************

ಓದುತ್ತ ಕುವೆಂಪು ನೆನಪಾಗುತ್ತಿದ್ದಾರೆ। ನಿಜ, ಕೋಡಗದ್ದೆ ಶಿವಮೊಗ್ಗೆಯಿಂದೇನೂ ದೂರವೇನಿಲ್ಲ.

November 13, 2008

ಮುರುಕು ಮಂಟಪದೊಳಗಿನ ಹರುಕುಬುಟ್ಟಿಯೊಳಗೆ...

*ಪುಟ್ಟಪುಟ್ಟಸಾಲುಗಳು ಕಟ್ಟಿಕೊಳ್ಳುತ್ತ ಕಟ್ಟಿಹಾಕುತ್ತವೆ, ಕಟ್ಟನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ಬರೆಸಿಕೊಳ್ಳುತ್ತವೆ, ಒರೆಸಿಬಿಡುತ್ತವೆ ।

**********


*ಅಕ್ಷರಗಳನ್ನೇ ಬಿತ್ತಿ ಅಕ್ಷರಗಳನ್ನೆ ಬೆಳೆಯುವ ಕನಸು। ಅಂತದ್ದೊಂದು ದೃಶ್ಯ ಅವನು ಕೆತ್ತಿದ ಯಾವ ಚಿತ್ರದಲ್ಲಿಯೂ ಇರುವುದಿಲ್ಲ, ಅವಳು ಬಿಡಿಸಿದ ಚಿತ್ರಗಳಲ್ಲಿಯೂ।

**********

*‘ಹೀಗೆ ಶುರುವಾದದ್ದು ಇಲ್ಲೀತನಕ ಬಂದು ಮುಟ್ಟುತ್ತದೆ ಅಂತ ಅವಳಿಗೆ ಕಿಂಚಿತ್ ಕಲ್ಪನೆಯೂ ಇರಲಿಲ್ಲ’ ಅವನು ಬರೆದಿಟ್ಟು ಹೋದ ಸಾಲನ್ನ ನಾನು ಕಥೆಯಾಗಿಸ್ತೀನಿ ಅಂತ ನಂಗೂ ನಂಬಿಕೆ ಇರಲಿಲ್ಲ।

**********


*ಕಲ್ಪನೆಗಳ ಕೆತ್ತು, ಕನಸಾಗುವುದಿಲ್ಲ। ಕನಸುಗಳನ್ನು ಹುಗಿ, ಸತ್ತು ಶವವಾಗುತ್ತವೆ, ನಿನ್ನದೇ ನೆನಪುಗಳಾಗಿ ಬೆರೆತುಹೋಗುತ್ತವೆ। ಕನಸುಗಳ ಬಿತ್ತು, ನನಸಾಗುತ್ತವೆ, ನಿನ್ನ ಜೊತೆಯಾಗಿರುತ್ತವೆ।

**********

*ಇವಳು ಶಕುಂತಲೆಯೋ ಅಥವಾ ಶಾಂತಲೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುವಾಗ ಯೋಚಿಸುತ್ತಿದ್ದ। ಕೊನೆಗೂ ತಾನು ದುಶ್ಶಂತನೋ, ವಿಷ್ಣುವರ್ಧನನೋ ಅರಿವಾಗಲೇ ಇಲ್ಲ।

**********

*‘ಆಹಾ॥ಏನ್ ಮಹಾ...ಪಾನಿ ಪೂರಿ, ಅದನ್ ತಿನ್ನೋಕೆ ಜಯನಗರ ಫೋರ್ಥ್ ಬ್ಲಾಕ್ ಗೇ ಹೋಗ್ಬೇಕಾ? ಹನುಮಂತನಗರ ಕಗ್ಗೀಸ್ ಬೇಕರಿ ಎದ್ರುಗಡೆ ಸಿಗೋ ಮಸಾಲೆಪೂರಿ ತಿಂದ್ರೆ ಆಮೇಲೆ ಅಲ್ಲಿಂದ ನೀವ್ ಕದಲೋಲ್ಲ॥ಗೊತ್ತಾ?’

**********


*ದಿನಾ ಅವನನ್ನ ಕೊರೀತಿದ್ದೆ ಸಿಗರೇಟ್ ಸೇದ್ಬೇಡ, ಬಿಟ್ಬಿಡು ಅಂತ। ಹ್ಞೂ...’ಅಂತಿದ್ದೋನು ಕೊನೆಯಲ್ಲಿ ಬಿಟ್ಟಿದ್ದು ಸಿಗರೇಟನ್ನಲ್ಲ, ನನ್ನ ಜೊತೆ ಮಾತು। ಸಿಗರೇಟಿಗಿಂತ ನನ್ನ ಮಾತು ಅವನನ್ನ ಹೆಚ್ಚು ಸುಟ್ಟಿತ ಅಂತ ಯೋಚನೆ. ನೀತಿಗಳು ಗಳಿಸಿಕೊಟ್ಟಷ್ಟನ್ನೇ ಕಳೆದುಹಾಕಬಲ್ಲವು.

**********


*ಒಳ್ಳೇ ಕಾಫಿ ಬೇಕಾದ್ರೆ ಬನಶಂಕರಿ ಕಾಂಪ್ಲೆಕ್ಸ್ ಹತ್ರ ಸುಳಿದಾಡ್ತಿದ್ರೆ ಕಾಫಿ ಡೇ ಕಾಫಿಯ ಪರಿಮಳ ಅಲ್ಲೇ ಸುಳಿದಾಡ್ತಿರತ್ತೆ। ಸುಗಂಧ ದೂರದವರೆಗೆ ಪಸರಿಸಿಕೊಳ್ಳಬಲ್ಲುದು, ಘಮದ ನೆನಪು ಹೊಸ ಘಮವನ್ನಿತ್ತು ಖುಷಿಕೊಡಬಲ್ಲುದು।

**********


*ಬನಶಂಕರಿ ಕಾಂಪ್ಲೆಕ್ಸ್ ಹತ್ರ ಇರೋ ಕಾಫಿ ಡೇ ಗೆ ಹೋದ್ರೆ ಕಾಫಿ ಸಿಗತ್ತೆ, ಕಾಫಿಯ ಘಮ ಮೆಡಿಕಲ್ ಕಾಲೇಜಿನ ಹುಡುಗ ಹುಡುಗಿಯರ ಸಿಗರೇಟಿನ ಹೊಗೆಯೊಳಗೆ ಹುಗಿದುಹೋಗಿರತ್ತೆ। ತಾಣಗಳ ಘಮದ ತ್ರಾಣವನ್ನು ಸುತ್ತಲಿನ ಗಾಳಿ ನುಂಗಬಲ್ಲುದು।

**********

*ಕಲ್ಲಾಗಿದ್ದೆ। ಅವನು ಕೊಟ್ಟ ರೂಪಕ್ಕೆ ಶಿಲಾಬಾಲಿಕೆಯಾದೆ। ಶಾಂತಲೆ ಅಂದ। ಅವನು ಕೊಟ್ಟ ಉಂಗುರ ಕಳಕೊಂಡು ಶಕುಂತಲೆಯಾದೆ।

****************************************************************************************

October 23, 2008

ವಿಚಿತ್ರಾನ್ನ ಸವಿಯುವಾಗ ಹೀಗೆನಿಸುತ್ತದೆ...

ಯಾರಾದರೂ ಚಿತ್ರಾನ್ನದ ಬಗ್ಗೆ ಮಾತನಾಡುತ್ತ  ಪನ್ ಡಿತರು ಅಂದರೆ ತಕ್ಷಣ  ನೆನಪಿಗೆ ಬರುವ ವ್ಯಕ್ತಿ ನಮ್ಮ ನಿಮ್ಮೆಲ್ಲರ ಪ್ರೀತಿಗೆ, ಅಭಿಮಾನಕ್ಕೆ ಪಾತ್ರರಾದ ಶ್ರೀವತ್ಸ ಜೋಶಿಯವರಲ್ಲವೇ! ಖಂಡಿತ ಈಗ ಪ್ರಸ್ತಾಪಿಸಬಯಸುತ್ತಿರುವುದೂ ಅವರ ಬಗ್ಗೇಯೇ. ಪ್ರೀತಿಯಿಂದ, ಅಭಿಮಾನದಿಂದ, ಗೌರವದಿಂದ ನೀವೆಷ್ಟೇ ತಲೆತಿಂದರೂ ಬೇಸರಿಸಿಕೊಳ್ಳದ ಜೋಶಿಯವರು ನಮ್ಮ ಕಾಲೆಳೆದು ನಗಿಸಬಲ್ಲವರು.  ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ ಅಂತ ಹಾಡುತ್ತ ಬೇಸರಿಸಿಕೊಂಡು ಕುಳಿತಿದ್ದ ಪಕ್ಷ ಜೋಶಿಯವರು ನಿಮಗೆ ಮಾತಿಗೆ ಸಿಕ್ಕಿದ್ದೇ ಆದಲ್ಲಿ ಅದು  ಭಾಗ್ಯವೆಂದೇ ಹೇಳಬೇಕು. ನಕ್ಕು ನಗಿಸಿ ಭ್ರಮೆಯಿಂದ ಭುವಿಗೆ ತಂದಿಳಿಸುವ ಚಾಕಚಕ್ಯತೆ ಅವರಲ್ಲಿದೆ.

ಜೋಶಿಯವರು ಉತ್ಸಾಹದ ಚಿಲುಮೆಯಂತೆ ಎಂಬುದನ್ನು  ಹೊಸದಾಗಿ ಹೇಳಬೇಕಾಗಿಲ್ಲ.  ಅನಿವಾಸಿ ಕನ್ನಡಿಗರಿಗೂ ಸಹ  ಸುಲುಭ ಲಭ್ಯವಾದ ಅತ್ಮೀಯಇ-ಪತ್ರಿಕೆಯಾದ ದಟ್ಸ್ ಕನ್ನಡದಲ್ಲಿ ‘ವಿಚಿತ್ರಾನ್ನ’ಪಾತ್ರೆಯ ಒಡೆಯರಾಗಿಯೂ,  ನಮ್ಮ ನಿಮ್ಮೆಲ್ಲರ ನೆಚ್ಚಿನ ದಿನಪತ್ರಿಕೆಗಳಲ್ಲೊಂದಾದ ವಿಜಯ ಕರ್ನಾಟಕದ ‘ಪರಾಗ ಸ್ಪರ್ಶ’ ಅಂಕಣದ ಯಜಮಾನರಾಗಿಯೂ  ಜೋಶಿಯವರು ಚಿರಪರಿಚಿತರು.  ಸಹನಾಮಯಿಯಾದ ಜೋಶಿಯವರು  ಸಹನಾಮಯಿ ಸಹಾನಾರವರ ಮನದೊಡೆಯರು ಸಹ. ಸೃಜನಶೀಲರಾದ ಇವರು ಸೃಜನ್ ಅವರ ಪಿತೃದೇವ ಹಾಗೂ ನಮ್ಮಂಥ ಅನೇಕಾನೇಕ ಓದುಗರ ಅಭಿಮಾನಕ್ಕೆ ಪಾತ್ರರಾದವರು.  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ  ವೃತ್ತಿಯಲ್ಲಿದ್ದೂ  ‘ವಿಚಿತ್ರಾನ್ನ’ವನ್ನು ಸತತ ಐದುವರ್ಷಗಳಕಾಲ ಪ್ರತಿಮಂಗಳವಾರ ದಟ್ಸ್ ಕನ್ನಡ ಓದುಗರಿಗೆ ಉಣಬಡಿಸಿ ‘ವಿಚಿತ್ರಾನ್ನದಾತಾ ಸುಖೀಭವ’ ಎನಿಸಿಕೊಂಡವರು. ಕಂಪ್ಯೂಟರಿನ ಹಾಳೆಗಳಲ್ಲಿ ಮಾತ್ರ ಲಭ್ಯವಾಗಿದ್ದ ‘ವಿಚಿತ್ರಾನ್ನ’ ಇದೀಗ ಪುಸ್ತಕ ರೂಪದಲ್ಲಿಯೂ ಲಭ್ಯವಿರುವುದು ನಮ್ಮೆಲ್ಲರ ಭಾಗ್ಯ. ‘ಮತ್ತೊಂದಿಷ್ಟು ವಿಚಿತ್ರಾನ್ನ’ಮತ್ತು  ‘ಇನ್ನೊಂದಿಷ್ಟು ವಿಚಿತ್ರಾನ್ನ’ಒಂದಾದ ಮೇಲೆ ಒಂದನ್ನು ಸವಿಯಬಹುದಾದ  ಬುತ್ತಿಯನ್ನದ ಎರಡು ಪಾತ್ರೆಗಳು.


‘ವಿಚಿತ್ರಾನ್ನ’ವನ್ನು  ದಿನಕ್ಕೊಂದು ಕಥೆಯಂತೆ ಓದುತ್ತಿರುತ್ತೇನೆ. ಇವು ನೀತಿಕಥೆಗಳ ಹಾಗಿರದಿದ್ದರೂ ಮಾಹಿತಿಕತೆಗಳಂತೆ ವಿಜೃಂಭಿಸುತ್ತವೆ.  ಹೀಗೇ  ಕುಳಿತಿದ್ದಾಗ  ಹಸಿವಾದರೆ ಕೆಲವೊಮ್ಮೆ ನನ್ನಿಷ್ಟದ ಖಾದ್ಯವಾದ ಚಿತ್ರಾನ್ನದ ನೆನಪಾದಾಗ ಚಿತ್ರಾನ್ನವನ್ನ ಪಾಕಿಸಿ ತಿನ್ನಲು ಸೋಮಾರಿಯಾಗಿ ಕುಳಿತಾಗಲೂ ಜೋಶಿಯವರ ‘ವಿಚಿತ್ರಾನ್ನ’ವೇ ನನ್ನ ಸಹಾಯಕ್ಕೆ ಬರುವುದು.  ನವಿರು ಹಾಸ್ಯ ಚಟಾಕಿಗಳನ್ನೊಳಗೊಂಡ ಜೋಶಿಯವರ ಲೇಖನಗಳು ತುಂಬು ಲವಲವಿಕೆಯಿಂದ ಸಾಗುತ್ತ ಮಾಹಿತಿ ಒದಗಿಸುತ್ತ ಹೋಗುವ ರೀತಿ ಓದುಗರನ್ನು ಸಂತೃಪ್ತಗೊಳಿಸುತ್ತದೆ. ಕೆಲವೆಡೆ ವಿಚಿತ್ರಾನ್ನ ತನ್ನದೇ ಪರಿಮಳವನ್ನು ಹೊಂದಿದ ರುಚಿಯಾದ  ಗಂಜಿಯಷ್ಟು ಸರಳವಾಗಿಯೂ ನಮ್ಮನ್ನು ತಂಪಾಗಿಸುತ್ತದೆ. ಇನ್ನು ಕೆಲವೆಡೆ ಬಂಗಾರಬಣ್ಣಕೆ ಹುರಿದ  ಕಡಲೆಬೇಳೆ ಎನ್ನಿಸಿದರೂ ಸ್ವಲ್ಪ ಅಗಿದು ತಿನ್ನುವವರಿಗೆ ಅದರ ಸ್ವಾದದ ಹಿತವೇ ಬೇರೆ. ‘ವಿಚಿತ್ರಾನ್ನ’ ಬರಿಯ ಒಗ್ಗರಣೆ ಅನ್ನವಾಗಿ ಯಾವತ್ತೂ ಅನ್ನಿಸುವುದೇ ಇಲ್ಲ. ಬೇರೆ ಬೇರೆ ಪ್ರದೇಶಗಳ, ರಾಜ್ಯಗಳ, ನಾಡುಗಳ, ಗ್ರಹಗಳಿಂದ ತಂದ ಉತ್ತಮ ಖಾದ್ಯ ಸಲಕರಣೆ(ವಿಷಯ)ಗಳನ್ನೆಲ್ಲ ಬಳಸಿ ತಯಾರಾದ ಪೌಷ್ಟಿಕ ಖಾದ್ಯವಾಗಿ  ಪರಿಣಾಮ ಬೀರುತ್ತದೆ . 

‘ವಿಚಿತ್ರಾನ್ನ’ ಪುಸ್ತಕ ರೂಪದಲ್ಲಿ ಲಭ್ಯವಿರುವ ವಿಚಾರಕ್ಕೆ ಶ್ರೀವತ್ಸ ಜೋಶಿಯವರನ್ನು ಅಭಿನಂದಿಸುವ ಮೊದಲಿಗೆ ‘ವಿಚಿತ್ರಾನ್ನ’ವನ್ನು ಪುಸ್ತಕರೂಪದಲ್ಲಿಯೂ ಹಾಗೂ ಇ ರೂಪದಲ್ಲಿಯೂ ನಮ್ಮ ಕೈಗೆಟಕುವಂತೆ ಅನುಗ್ರಹಿಸಿರುವದಕ್ಕಾಗಿ ಧನ್ಯವಾದ ಹೇಳಲೇಬೇಕು.     ‘ವಿಚಿತ್ರಾನ್ನ’ಪುಸ್ತಕರೂಪದಲ್ಲಿ ಲಭ್ಯವಿರುವಂಥಹ ಸಿಹಿಸುದ್ದಿಯು ಈಗಾಗಲೇ ನಮಗೆಲ್ಲ ಗೊತ್ತಿರುವಂತದ್ದೇ.  ಪುಸ್ತಕ ರೂಪದಲ್ಲಿ  ‘ವಿಚಿತ್ರಾನ್ನ’ಲಭ್ಯವಿರುವುದರಿಂದ  ಬೇಕಾದ ತಾಣದಲ್ಲಿ ಕುಳಿತು ಅಥವಾ ನಿಂತು ಅದರ ಸವಿಯನ್ನು  ಸವಿಯಬಹುದಾಗಿದೆ. ‘ವಿಚಿತ್ರಾನ್ನ’ ಪುಸ್ತಕ ಲಭ್ಯವಿದೆಯಾ, ಹಾಗಾದರೆ ಇವತ್ತೇ ಕೊಂಡುತಂದು ಆರಾಮವಾಗಿ ಮಲಗಿಕೊಂಡು ಓದಿಬಿಡುತ್ತೇನೆ’ ಅಂತ  ಮಲಗಿಕೊಂಡು ‘ವಿಚಿತ್ರಾನ್ನ’ ಸವಿಯುವಾಗ ಗಂಟಲಲ್ಲಿ ಸಿಕ್ಕೀತಾದರೆ ನನ್ನನ್ನು ನೀವು ಬೈದಲ್ಲಿ ಅದಕ್ಕೆ ನಾನು ಜವಾಬ್ಧಾರಳಲ್ಲ.  ವಿಚಿತ್ರಾನ್ನವು ತದೇಕಚಿತ್ತರಾಗಿ ಕುಳಿತು ಓದುವವರ ಮಿದುಳನ್ನೂ ಮನಸನ್ನೂ ತುಂಬಿಸಿ ಹಸಿವೆಯನ್ನು ಮರೆಸಬಲ್ಲಂತಹುದಾಗಿದೆಯೇ ಹೊರತು ಆಲಸಿಯಾಗಿ ಮಲಗಿ ನಿದ್ರೆತಂದುಕೊಳ್ಳುವುದಕ್ಕಾಗಿ ಓದುವ ಪುಟಗಳನ್ನು ಹೊಂದಿಲ್ಲ. ಅರ್ಥೈಸಿಕೊಳ್ಳುವಂಥಹ, ಆಳವಡಿಸಿಕೊಳ್ಳುವಂಥಹ ವಿಚಾರಧಾರೆಗಳಿಗಿಲ್ಲಿ ಖಂಡಿತ ಕೊರತೆಯಿಲ್ಲ. ಪರಧ್ಯಾನತೆಯಿಂದ ಓದಿದರೂ  ಅರ್ಥವಾಗಿಬಿಡುವಂತೆ ಹೆಣೆದ ದಿಢೀರ್ ಇಷ್ಟವಾಗುವ ಕಥೆಪುಸ್ತಕ ‘ವಿಚಿತ್ರಾನ್ನ’ಅಲ್ಲವೆನ್ನುವುದೂ ಅಷ್ಟೇ ಸತ್ಯ. ಓದುತ್ತ ಓದುತ್ತ ಓದಿಸಿಕೊಂಡು ಆಪ್ತವಾಗುವ ಅಂಕಣಮಾಲೆಯಿದು.   ಜಗತ್ತಿನ ಹಲವು ವಿಚಾರಧಾರೆಗಳ ಹೊತ್ತ ನದಿ, ಮಾಹಿತಿಗಳ ಸರೋವರವೆಂದರೆ ತಪ್ಪಾಗಲಾರದು.     
ಇಂತಹ ‘ವಿಚಿತ್ರಾನ್ನ’ವನ್ನು ನೀವೂ ಸವಿದಿರುತ್ತೀರಿ. ಅಥವಾ ಸವಿಯಬೇಕೆನಿಸಿದ ಪಕ್ಷ ಹೆಚ್ಚಿನ ಮಾಹಿತಿಗಾಗಿ srivathsajoshi@yahoo.com ವಿಳಾಸಕ್ಕೆ ಪ್ರೀತಿಯಿಂದ ಒಂದು ಪತ್ರ ಬರೆಯಿರಿ.  ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾರೆ.  


‘ವಿಚಿತ್ರಾನ್ನ’ ಓದುಗರ ಮಿದುಳನ್ನ ಸಾಣೆಹಿಡಿದು ಚುರುಕಾಗಿಸಬಲ್ಲುದು, ಹೊಳಪಾಗಿಸಬಲ್ಲುದು.  ಓದುತ್ತ ಓದುತ್ತ ಮನವನ್ನು ಪ್ರಸನ್ನಗೊಳಿಸಬಲ್ಲ ಅಂಕಣಮಾಲೆಯಿದು ಎನ್ನಿಸದೇ ಇರಲಾರದು.  ಓದುತ್ತ ಓದುತ್ತ ಹಲವಾರು ಕಂಡು ಕೇಳರಿಯದ ವಿಷಯಗಳನ್ನೆಲ್ಲ ಕಾಣುತ್ತ ಹೋಗುತ್ತೇವೆ ನಾವಿಲ್ಲಿ. ಜೊತೆ ಜೊತೆಗೆ ಈ ಎಲ್ಲ ವಿಚಾರಧಾರೆಗಳನ್ನ ಹೆಣೆದ ರಚನೆಕಾರರ ಬೌದ್ಧಿಕ ಕುಶಲತೆ ನಮ್ಮನ್ನು ಚಕಿತರನ್ನಾಗಿಸುತ್ತದೆ, ಯೋಚನೆಗೆ ತಳ್ಳುತ್ತದೆ. ಜೋಶಿಯವರ ಸೃಜನಶೀಲತೆ ಬೆರಗುಗೊಳಿಸುತ್ತದೆ.  ಹುಟ್ಟುತ್ತಿರುವ ಸೂರ್ಯನ ಎಳೆಬೆಳಕನ್ನೂ, ಮುಳುಗುವ ಸೂರ್ಯನ ರಂಗನ್ನೂ, ಮುಸ್ಸಂಜೆಯ ತಂಗಾಳಿಯ ಬಾಹ್ಯಸೊಬಗನ್ನು ಸವಿಯುವವರಿಗೂ, ಅವುಗಳ ಆಂತರ್ಯ ಅರಸುವವರಿಗೂ, ಅವುಗಳಿಗೆಲ್ಲ ಮೂಲಹುಡುಕುವವರಿಗೆ,  ಎಳೆಬೆಳಕಿನ ಎಳೆಯ ಜಾಡು ಅರಸುವವರಿಗೆ, ರಂಗಿನ ರಚನೆಗಳ ಅರಿಯಬೇಕೆನಿಸಿದವರಿಗೆ, ತಂಗಾಳಿಬೀಸುವ ದಿಕ್ಕಿಗೊಂದು ಕಾರಣ ಕೇಳುವವರನ್ನು,  ಜಗತ್ತಿನ ಹೊಸ ಹೊಸ ವಿಚಾರಗಳನ್ನೂ ನಮ್ಮದೇ ಭಾಷೆಯೊಳಗೆ ಕಂಡುಕೊಳ್ಳಹೊರಟಿರುವವರಿಗೆಲ್ಲರಿಗೂ  ದಾರಿಯಾಗುತ್ತದೆ ‘ವಿಚಿತ್ರಾನ್ನ’.  ನಾವೆಲ್ಲ ಓದಿ ಅರ್ಥೈಸಿಕೊಳ್ಳಬೇಕಾದ್ದು, ಆಳವಡಿಸಿಕೊಳ್ಳಬೇಕಾದವುಗಳೆಲ್ಲವುಗಳ ಮಾಹಿತಿ ಮಾಲೆಯೇ ‘ವಿಚಿತ್ರಾನ್ನ’ವೆಂದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯೆನಿಸಲಾರದು. ‘ವಿಚಿತ್ರಾನ್ನ’ವನ್ನು ಓದಿ ನೋಡಿದಾಗಲೇ ಅರಿವಾಗುವುದು ಪ್ರಾಪಂಚಿಕ ಭಾವಗಳ ಹಾದಿಯಲ್ಲಿ ಮಾಹಿತಿಕೇಂದ್ರಕ್ಕೆ ತಲುಪಿದ್ದೇವೆ ಎಂಬುದು.

  

  

October 15, 2008

ಅರಿವಿಗೇನರಿವು...

ಕುಂಚಕರಿವಿಹುದೆ ತಾ ಬಳಿವ ಬಣ್ಣದ್ದು
ಹರಿವ ಜಲಕೇನರಿವು ತನ್ನಂಚೆ ವಿಳಾಸ
ಆಗಸವು ಅರಿತಿಹುದೆ ತನ್ನಾದಿ ಅಂತ್ಯವನು
ನಿನಗೆ ಅರಿವಿತ್ತೆ ಈ ಹೊಸಿಲು ನಿನದೆಂದು

ಮೊಗ್ಗರಿತು ಅರಳುವುದೆ ಹೂವಾಗಿ ತಾನು
ಮೊಳಕೆಗೇನರಿವು ತಾನೊಂದು ಎಲೆಯೆಂದು
ಸಸಿಗೆ ಅರಿವಿಹುದೇ ನಾಳೆ ತಾ ಮರವೆಂದು
ಹುಟ್ಟು ತಾ ಹುಟ್ಟುವುದೆ ಮರಣವನು ಅರಿತು


ಬತ್ತಿಗರಿವಿಹುದೆ ತಾ ಬೆಳಗುತಿಹೆನೆಂದು
ತೈಲಕೇನರಿವು ದೀಪವೇ ತಾನೆಂದು
ಮೌನ ಅರಿತಿಹುದೆ ತನ್ನರ್ಥವೇನೆಂದು
ಮಾತರಿತು ಮುಗಿವುದೇ ಮೌನ ತಾನೆಂದು

ಸತ್ಯಕ್ಕೆ ಅರಿವಿಹುದೆ ತಾನೊಂದು ಸುಳ್ಳೆಂದು
ಸುಳ್ಳಿಗೇನರಿವು ಶೂನ್ಯ ತಾನೆಂದು
ಆಳಕ್ಕೆ ಅರಿವಿಹುದೆ ತನ್ನೆತ್ತರದ ಮಿತಿ
ಎತ್ತರವು ಅಳೆಯುವುದೆ ತನ್ನಾಳವನ್ನು

ನಿನಗರಿವೆ ನಿನ್ನರ್ಥಕೆ ಅರ್ಥವೇನೆಂದು
ಇಂದುನಾಳೆಗಳಂಚಿಗೆ ಹೆಸರು ಏನೆಂದು
ಅನಂತಕೂ ಅಂತ್ಯವೊಂದಿರಲೇಬೇಕು
ಪ್ರತಿ ಅಂತ್ಯಕೂ ಆದಿಯೊಂದಿರಲೇಬೇಕು

October 9, 2008

ಕುಂಚಕೇನರಿವು ಹಿನ್ನೆಲೆಯ ರಂಗಿನದು...

‘ಕೋಪವಾ?’ ಅಂದವನ ಮಾತಿಗೆ ಮೌನದಲ್ಲಿಯೇ ನಕ್ಕು ಸುಮ್ಮನಾಗಿದ್ದೇನೆ.
‘ನಿನ್ನೊಳಗೇನೋ ನೋವಿದೆ, ಹೇಳುತ್ತಿಲ್ಲ ’ ಅಂದವನ ಮಾತಿಗೆ ನಿಧಾನಕ್ಕೆ ಉಸುರಿದೆ.
‘ಅವನ ಫೋಟೋ ಡೆಸ್ಕ್ ಟಾಪ್ ಅಲ್ಲಿಟ್ಟಿದ್ದೆ , ಈಗ ಕಾಣಿಸ್ತಿಲ್ಲ’ಅಂದೆ.
‘ಓ..ಅದಾ..ಸ್ಸಾ..ರೀ. ನಾನು ನಿನ್ನೆ ಅದನ್ನ ನೋಡಿದೆ, ನಿಂಗೆ ಬೇಡವೇನೋ ಅಂದ್ಕೊಂಡು ನಿನ್ನ ಕೇಳ್ದೇನೇ ರಿಸೈಕಲ್ ಬಿನ್ ಗೆ ಹಾಕ್ಬಿಟ್ಟೆ, ಅಲ್ಲೊಂದ್ಸಲ ಹುಡ್ಕು ಸಿಗ್ಬಹುದು’ ಅಂದ.
ಯಾಕೋ ಏನು ಮಾಡೋಕೆ ಹೋದ್ರೂ ಈಗೀಗ ಕೆಲಸಗಳ್ಯಾವುವೂ ಸುಸೂತ್ರವಾಗಿ ಸಾಗ್ತ ಇಲ್ಲ, ಬರೆಯೋಕೆ ಮನ್ಸಿಲ್ಲ, ಓದೋಕೆ ...ಓದೋಕೂ ಮನ್ಸಿಲ್ಲ.
‘ಸುಮ್ನೆ ಕೂತಿರ್ಬೇಕು ಅಂದ್ಕೊಂಡು ಕೂತ್ಕೊಳ್ಳೋಕೆ ಹದಿಮೂರುವರ್ಷದ ಹುಡುಗಿಗೆ ಸಿಗೋವಷ್ಟು ಟೈಮ್ ನಂಗೆ ಸಿಗತ್ತಾ? ಹದಿಮೂರನ್ನ ತಿರುಮುರುವಾಗಿಡೋಷ್ಟು ವಯಸ್ಸಾಗ್ತ ಬಂತು’ ಅಂತ ಯೋಚಿಸಿದವಳಿಗೆ ನಗು ಬಂತು ‘ವರ್ಷ ಎಷ್ಟೇ ಆದ್ರೂ ದಿನಕ್ಕಿರೋದು ಇಪ್ಪತ್ನಾಲ್ಕು ಗಂಟೆ ಮಾತ್ರ ಅಲ್ಲವಾ?’ ಅನ್ನಿಸಿ ತುಟಿಬದಿಗೆ ನಕ್ಕು ಸುಮ್ಮನಾದೆ.

ಯೋಚಿಸ್ತಿರೋವಾಗ್ಲೇ ಮತ್ತೆ ಕೇಳ್ದ ‘ಏನೇ.. ಯಾಕ್ ಹೀಗಿರ್ತೀಯಾ?’ ಅಂದ.
ಹೀಗೇ ಕೂತಿದ್ರೆ ಇವನಿನ್ನು ಸುಮ್ಮನಿರೋಲ್ಲ ಅಂತ ಗೊತ್ತಾಯ್ತು, ಆಗಿದ್ದಾಗ್ಲಿ, ಹೇಳಿಯೇಬಿಡೋಣ ಅಂದ್ಕೊಂಡು ಹೇಳ್ದೆ ‘ಅವನನ್ನ ಸೆಲೆಕ್ಟ್ ಮಾಡೋಕೆ ಟ್ರೈ ಮಾಡ್ತಿದ್ದೆ, ಆಗ್ಲಿಲ್ಲ ’ ಅಂದೆ ಸಣ್ಣ ಧ್ವನಿಯನ್ನ ಕಷ್ಟಪಟ್ಟು ಆಚೆತಂದ್ಕೊಂಡು. ಇವನೇನಂತಾನೋ ಅನ್ನೋ ಭಯ ಧ್ವನಿಯನ್ನ ಸುತ್ಕೊಂಡ ಹಾಗಿತ್ತು.
‘ಎಲ್ಲಿದಾನೆ ಅವನು?’ ಅಂತ ಕೆಳ್ದ.
‘ಇಲ್ಲೇ....ಸಿಕ್ದ, ನೋಡು’ ಅಂದೆ. ‘ಹಾಗಾದ್ರೆ...magic wand tool ತಗೊಂಡು ಅವನ ಸುತ್ತಲೂ ಒಂದು ಸುತ್ತು ಓಡಾಡ್ಸು, ಆಗ ನೋಡು, ಅವನನ್ನ ನೀನ್ ಸೆಲೆಕ್ಟ್ ಮಾಡ್ತೀಯೋ, ಅವನು ನಿನ್ನ ಸೆಲೆಕ್ಟ್ ಮಾಡ್ತಾನೋ ಗೊತಾಗತ್ತೆ..’ ಅಂತ ಹೇಳಿ ನಕ್ಕವನನ್ನೇ ನೋಡ್ತಾ ಇದ್ದೆ.
ನಂಗೂ ನಗು ಬಂತು ನಿಜವಾಗ್ಲೂ.... ಎಷ್ಟು ಒಳ್ಳೆಯವನು ಅಂತ ಮತ್ತೆ ಮತ್ತೆ ಅನ್ನಿಸಿಬಿಡೋದು ಇಂತ ಗಳಿಗೆಗಳಲ್ಲೇ.....

ಅವನ ಕೈ ಹಿಡ್ಕೊಂಡು ಮನೆಯಾಚೆ ಕರಕೊಂಡುಬಂದು ನಿಲ್ಲಿಸಿ ಆಗಸ ನೋಡ್ತಾ ಅಲ್ಲೇ ನಿಂತ್ಕೊಂಡೆ. ಮತ್ತೆ ಹೇಳ್ದೆ ಅವನ ಕಿವಿಯಲ್ಲಿ ‘ನಿನ್ನ ಸೆಲೆಕ್ಟ್ ಮಾಡಿದ್ದಾಯ್ತು, ನಿನ್ನಿಷ್ಟದ ನೀಲಿಯಲ್ಲಿ ಯಾವ ನೀಲಿಯನ್ನ background ಗೆ ಇಡಲಿ’ ಅಂತ ಕೇಳ್ದೆ. ಇಬ್ರೂ ಆಗಸ ನೋಡ್ತಾ ನಿಂತಿದ್ವಿ. ಆಗಸದಲ್ಲಿ ಆರು ಥರದ ನೀಲಿಗಳು ತೇಲಾಡ್ತಾ ಇದ್ರೆ... ಅವನಲ್ಲಿ ಮುಳುಗ್ತಾ ಇದ್ದ, ಇವನು ಮಸುಕಾಗಿ ನಿಂತಿದ್ದ. ದೂರದಲ್ಲಿ ಹಕ್ಕಿಗಳೆರಡು ಹಾರ್ತಾ ಇದ್ರೆ ರೆಕ್ಕೆಯಿಲ್ಲದೇ ನಾ ಇವನ ಜೊತೆ ಹಾರಡ್ತಾ ಇದ್ದೆ.

ಕುಂಚಕ್ಕೆ ಗೊತ್ತಿರುವುದಿಲ್ಲ ಹಿನ್ನೆಲೆಗೆ ಯಾವ ಬಣ್ಣ ಹೊಂದುತ್ತದೆಯಂತ, ಹಿನ್ನೆಲೆಯ ಬಣ್ಣವನ್ನೂ ನಾವೇ ಆರಿಸಿಕೊಂಡಿರಬೇಕು.

October 2, 2008

ಹ್ಯಾಪಿ ಬರ್ಥ್ ಡೇ... ಬ್ಲಾಗ್ ಮರಿ...


ನಿಮ್ಮೆಲ್ಲರ ಮಡಿಲೊಳಾಡಿದ ಮುದ್ದು ಮರಿಯಿದು. ನಾ ಟೈಪಿಸಿದ ತೊದಲುಗಳನೆಲ್ಲ ಕಲಿತುಕೊಂಡು ನಿಮ್ಮೆಲ್ಲರ ಮುಂದಾಡುತ್ತ ವರ್ಷವುರುಳಿದ್ದನ್ನೇ ನಾನು ಮರೆಯುವಂತೆ ಮರೆಸಿದ ನನ್ನ ಬ್ಲಾಗ್ ಮರಿಯಿದು. ಇವತ್ತು ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಜಯಂತಿಯ ಘಮದ ನಡುವೆಯೇ ನನ್ನೀ ಬ್ಲಾಗ್ ಗೂ ವರುಷ ತುಂಬಿತು. ಇವತ್ತಿಲ್ಲಿ "ನೆನಪು ಕನಸುಗಳ ನಡುವೆ" ಎಂಬ ನನ್ನ ಪುಟಾಣಿ ಬ್ಲಾಗ್ ಮರಿಗೆ ಹುಟ್ಟಿದ ದಿನ. ಬ್ಲಾಗ್ ಮರಿಯನ್ನ ಎತ್ತಿ ಆಡಿಸಿ, ಆನಂದಿಸಿ, ಮುದ್ದಿಸಿ, ಗದರಿ ಅಳಿಸಿ, ನಗಿಸಿ ನಲಿಸಿದ ನಿಮ್ಮೆಲ್ಲರಿಗೂ ಬ್ಲಾಗ್ ಮರಿಯ ಹುಟ್ಟುಹಬ್ಬಕ್ಕೆ ಆಮಂತ್ರಣ ಕೋರುತ್ತಿದ್ದೇನೆ. ಇವತ್ತು ನನ್ನ ಬ್ಲಾಗ್ ಮರಿಯ ಹುಟ್ಟುಹಬ್ಬವನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಆಚರಿಸೋಣ ಅಂತ ನಿಮ್ಮೆಲ್ಲರಿಗಾಗಿ ಕಾಯ್ತಾ ಇಲ್ಲೇ ಬ್ಲಾಗ್ ಮರಿಗೆ ಹೊಸ ಬಟ್ಟೆ ತೊಡಿಸಿ ನಿಮ್ಮೆಲ್ಲರ ಬರುವಿಕೆಯನ್ನೇ ಕಾಯ್ತಾ ನಾನೂ ಮತ್ತು ನನ್ನ ಬ್ಲಾಗ್ ಮರಿ ಇಬ್ಬರೂ ಕುಳಿತಿದ್ದೇವೆ. ನೀವೆಲ್ಲ ಬಂದಾದ ತಕ್ಷಣ ಕೇಕ್ ಕಟ್ ಮಾಡಲಿದ್ದೇವೆ..

September 29, 2008

ತೀರದ ತೀರವಿದು, ಮುಗಿಸದಿರು ಯಾನ...

ಗೆಳೆಯ/ಗೆಳತಿಯರೇ...
ನಮ್ಮೆಲ್ಲರ ಪ್ರೀತಿಯ, ಮುದ್ದಿನ, ಚಂದದ ದೋಣಿಯೊಂದು ದೂರತೀರಯಾನ ಹೊರಟಿದೆ. ಹಿಡಿದು ನಿಲ್ಲಿಸುವ ಬನ್ನಿ. ಸಣ್ಣಗೆ ನಗುವ ತಣ್ಣಗಿನ ಮೌನದಲಿ, ಮುದ್ದಿಸುವ ಮಾತಿನಲಿ, ತಂಪುಗಾಳಿಯಲಿ, ಇಂಪು ಮುಸ್ಸಂಜೆಯಲಿ, ಚುಮುಚುಮು ನಸುಕಿನಲಿ, ಅರೆಬಿರಿದ ಬೆಳಗಿನಲಿ, ಬೆಳಕರೆವ ಹಾದಿಯಲಿ, ಎಳೆಬೆಳದಿಂಗಳಲಿ, ದಿನಬೆಳೆದ ಚಂದ್ರನಡಿ ಸದ್ದಿರದ ತಂಗಾಳಿಯೊಲರಳಿ ಘಮ ಸೂಸಿದ ಮೊಗ್ಗಿನಲಿ, ಗರಿಗರಿಯ ಮಂಜಿನಲಿ, ಬಿಳಿಬೆರೆತ ಇಬ್ಬನಿಯಲಿ, ಭಾವ ಬಿರಿದರಳಿದ ಹೂವಿನಲಿ, ಬಳ್ಳಿಯಂಚಲರಳಿದ ಗೊಂಚಗೊಂಚಲು ಮಲ್ಲಿಗೆಯಲಿ, ನೀರಪರದೆಯಲಿ ಬೆರಳಂಚು ಬೆರೆತಾದ ಆ ಸಣ್ಣ ಅಲೆಯಲ್ಲಿ ನಮ್ಮನೆಲ್ಲ ನವಿರಾಗಿ ಹೊತ್ತೊಯ್ದು ತೀರದಲೆಗಳಲಿ ತೇಲಿಸಿ ನಲಿನಲಿಸಿದ ದೋಣಿಯೊಂದು ಯಾನ ಹೊರಟಿದೆ, ಹಿಡಿದು ನಿಲ್ಲಿಸುವ ಬನ್ನಿ.

ಯಾನವಿರಾಮದಲಿ ಪಯಣಿಸಿದ ಹಾಡು ಇಲ್ಲಿ ಕೆಳಗಿದೆ ನೋಡಿ, ದಯಮಾಡಿ ಹಿಡಿದು ನಿಲ್ಲಿಸಿ ದೋಣಿ...

-ಶಾಂತಲಾ ಭಂಡಿ.


ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..

ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.

ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.

ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..

-ಪ್ರೀತಿಯಿಂದ
ಸಿಂಧು

July 17, 2008

ಬತ್ತಿದ ಬೆಳದಿಂಗಳು ಹರವಿಕೊಳದು

ಪ್ರೀತಿಯ ನೀವುಗಳೆ....


ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"



ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"


ನಿಮ್ಮೆಲ್ಲರ
-ಶಾಂತಲಾ ಭಂಡಿ.

July 14, 2008

ಮೂಡಲ ಮನೆಯ ಮುತ್ತಿನ ನೀರಿನ ನೆನಪು

ಪದವಿಯ ಮೊದಲವರ್ಷದಲ್ಲಿದ್ದಾಗ ಕಾಲೇಜಿನ ವಾರ್ಷಿಕ ಸಂಚಿಕೆಗಾಗಿ ಬರೆದ ಲೇಖನವೊಂದು ಸಿಕ್ಕಿತು. ಆ ದಿನಗಳ ನೆನಪುಗಳು ಕೊಡುವ ಖುಷಿಯೇ ಬೇರೆ. ಆ ನೆನಪುಗಳೇ ಸಾಕು ದಿನ ಸಂಪೂರ್ಣವಾಗಲು. ಅದರಲ್ಲೂ ಡಾ. ದ ರಾ ಬೇಂದ್ರೆಯಂತವರ ನೆನಪಿನಲ್ಲಿ ತೇಲುತ್ತಿರುವಾಗ ನಿಮ್ಮೆಲ್ಲರ ನೆನಪು. ನೆನಪಿನ ದೋಣಿಯಲ್ಲಿ ನಿಮ್ಮೆಲ್ಲರೊಂದಿಗೆ ವಿಹರಿಸುವ ಖುಷಿಯೇ ಬೇರೆ ಎನಿಸಿತು. ಬೇಂದ್ರೆಯವರ ‘ಸಖಿಗೀತ’ ಓದಿ ಆ ದಿನಗಳಲ್ಲಿ ನನಗನಿಸಿದ ನನ್ನೊಳಗಿನ ಭಾವಗಳ ತುಣುಕುಗಳಿವು ಅಂತ ಮಾತ್ರ ಹೇಳಬಲ್ಲೆ. ವಿಮರ್ಶೆಯಂತೂ ಅಲ್ಲವೇ ಅಲ್ಲ. ಮುದುಡಿ ಮೂಲೆಯಲ್ಲಿದ್ದ ಹಳೆಯ ಹಾಳೆಗಳ ನಿಮಗಾಗಿ ತೆರೆದಿಟ್ಟೆ. ಒಂದಿಷ್ಟು ಧೂಳನ್ನೆಲ್ಲ ಕೊಡವಿ ಹಳೆಯ ಪುಟಗಳಿಗೆ ಹೊಳಪು ಕೊಡುವ ನಿಮ್ಮೆಲ್ಲರಿಗಾಗಿ ಈ ಪುಟಗಳು. ಓದಬೇಕೆನ್ನಿಸಿದರೆ ಪ್ರತಿ ಪುಟದ ಮೇಲೂ ಕ್ಲಿಕ್ಕಿಸುವ ಕಷ್ಟವನ್ನು ನಿಮಗೇ ಬಿಟ್ಟಿದ್ದೇನೆ. ಇನ್ನು ನೀವುಂಟು, ನನ್ನ ಹಳೆಯ ಪುಟವುಂಟು.


‘ಸಖಿಗೀತ’ ಕ್ಕೆ ಸಂಬಂಧಿಸಿದ ನಿಮ್ಮ ಅನಿಸಿಕೆಗಳನ್ನೂ ಇಲ್ಲಿಷ್ಟು ತೇಲಬಿಡಿ, ನಿಮ್ಮೆಲ್ಲರ ಅನಿಸಿಕೆಗಳಿಲ್ಲಿ ಕಲೆತು ಸಿಹಿಹೂರಣವಾಗಲಿ ಈ ಸಮಯ.

ನನ್ನ ಕಾಲೇಜಿನ ವಾರ್ಷಿಕ ಸಂಚಿಕೆಯ ಮುಖಪುಟ (ಹಾಳೆ ಹಳೆಯದಾದರೇನು ನೆನಪು ನವನವೀನ. ಅಲ್ಲವೇ?:)




ಪುಟ ೧


ಪುಟ೨


ಪುಟ೩


ಪ್ರೀತಿಯಿಂದ,
-ಶಾಂತಲಾ ಭಂಡಿ.

**********************************************************************************************


Harish - ಹರೀಶ said...
ಶಾಂತಲಕ್ಕ, ಎಷ್ಟೋ ಜನಕ್ಕೆ (ಅಲ್ಲಿ ಓದಿದವ್ವೆಯ) ಎಂ.ಎಂ. ಅಂದ್ರೆ ಮೋಟಿನಸರ ಮೆಮೋರಿಯಲ್ ಅಂತ ಗೊತ್ತಿಲ್ಲೆ...

ಯಾರ್ನಾದ್ರೂ ಕೇಳಿ ನೋಡು :-)

July 14, 2008 7:59 PM
xx said...
shanatala avare, nimma bhavanegaLu nijakkoo nammannu yavudo lokakke karedoiuttade. nimma kannada jnaana, padhakosha adbhuta! naanoo ille nimma cupertino dalle iddeene. neevu illi elliddeera?

July 14, 2008 10:13 PM
xx said...
kshamisi. Nanna parichaya maadikolluvuda marethe. Naanu saraswathi vattam antha. iththeechige taane bengaloorininda bandiddene. nanage nanna magalaLu nimma blog torisidalu. Odi bahaLa ishta aayithu. nimma innitara lekhanavannooo oduttiddene. specially the blog that you have written about 'mother's feeling' is excellent. Keep up the good job!

July 14, 2008 10:27 PM
ತೇಜಸ್ವಿನಿ ಹೆಗಡೆ- said...
ಶಾಂತಲಾ,

ದಾಂಪತ್ಯದ ಸಾರವನ್ನು.. ಅದರೊಳಗಿನ್ ಸಿಹಿ-ಕಹಿ ಪಿಸುಮಾತುಗಳನ್ನು, ವಿರಸ-ಸರಸಗಳನ್ನು ಓದಬೇಕಾದರೆ ಅದಕ್ಕೆ ಸಖೀಗೀತಕ್ಕಿಂತ ಉತ್ತಮ ಕವನ ಸಿಗಲಾರದೇನೋ. ಅದ್ಭುತ ಕವನ. ಗೂಡಾರ್ಥಗಳನ್ನೊಳಗೊಂಡಿದ್ದರೂ ಸರಳತೆಯನ್ನೇ ಹೊದ್ದು ಅದ್ದಿರುವ ಕವನ ನನ್ನ ಮೆಚ್ಚಿನ ಕವನವೂ ಹೌದು. ಅದನ್ನು ವಿವರಿಸಲು ಯತ್ನಿಸಿದ ನಿನ್ನ ಪ್ರಯತ್ನ ತುಂಬಾ ಶ್ಲಾಘನೀಯ. ತುಂಬಾ ಇಷ್ಟವಾಯಿತು. ಮತ್ತಷ್ಟು ಇಂತಹ ಬರಹಗಳು ಬರಲಿ.

July 15, 2008 8:00 AM
sunaath said...
ಶಾಂತಲಾ,
ಬೇಂದ್ರೆಯವರ ಸಖೀಗೀತದ ಸಾರವನ್ನು ಎಷ್ಟು ಚೆನ್ನಾಗಿ ಬರೆದಿದ್ದೀಯಮ್ಮ. ಅವರ ಇತರ ದಾಂಪತ್ಯಗೀತಗಳ ಭಾವಗಳನ್ನೂ ಸಂಕಲಿಸಿ, ಒಂದು ಲೇಖನವನ್ನು ನೀನು ನೀಡಿದರೆ
ಸ್ವಾರಸ್ಯಕರವಾಗುವದೆಂದು ನನ್ನ ಭಾವನೆ.
-ಸುನಾಥ ಕಾಕಾ

July 24, 2008 2:57 PM
ಸಿಮ್ಮಾ said...
ಶಾಂತಲಾ ಅವರೇ,
ನಂಗೆ ಈ ವಿಮರ್ಶೆ ಇದೆಲ್ಲಾ ಬರೋಲ್ಲ, ಅದೂ ಅಲ್ದೆ ನಾನು ಬೇಂದ್ರೆಯವರನ್ನ ಜಾಸ್ತಿ ಓದಿದವನೂ ಅಲ್ಲ. ಆದರೆ ಅವರ ಕೆಲವು ಕವನಗಳಲ್ಲಿನ ಸಾಲುಗಳು ತುಂಬಾ ಇಷ್ಟ ಅವುಗಳನ್ನಷ್ಟೇ ನಾನಿಲ್ಲಿ ಹಂಚಿ ಕೊಳ್ಳ ಬಲ್ಲೆ.
1. ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನ್ನೆರಕಾವ ಹೊಯ್ದ.
ಬಾಗಿಲುನ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ........

2. ನೀ ಹೀಂಗ ನೋಡ ಬ್ಯಾಡದಲ್ಲಿನ,
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ..

3. ಯುಗಾದಿಯ,

ವರುಷಕೊಂದು ಹೊಸತು ಜನ್ಮ
ಹರುಕೊಂದು ಹೊಸತು ನೆಲೆಯು
ಅಖಿಲ ಜೀವ ಜಾಲಕೆ

ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ,ಒಂದೇ ಹರೆಯ
ನಮಗದಷ್ಟೇ ಏತಕೆ?

ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದಗಳು

July 25, 2008 7:01 AM
ಶಾಂತಲಾ ಭಂಡಿ said...
@ಹರೀಶ
ಧನ್ಯವಾದಗಳು,
ನೀನು ಹೇಳಿದ್ದು ನಿಜ, ಅಲ್ಲೇ ಡಿಗ್ರಿ ತಗಂಡುಹೋದ್ರೂ ಎಂ.ಎಂ. ಅಂದ್ರೇನು ಅನ್ನೋ ಬಗ್ಗೆ ಯೋಚ್ನೆ ಮಾಡದ ಜನ ಇರ್ತ. ಎಂತಕ್ಕೆ ಹೇಳಿ ನಂಗೂ ಗೊತ್ತಿಲ್ಲೆ.

@XX
ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನೀವು ನನ್ನ ಬರಹಗಳನ್ನ ಇಷ್ಟು ಪ್ರೀತಿಯಿಂದ ಓದುತ್ತಿರುವುದು ನನ್ನ ಖುಷಿ.

@ತೇಜಸ್ವಿನಿ
ಧನ್ಯವಾದಗಳು,ಕಾಲೇಜಿನ ದಿನಗಳಲ್ಲಿ ಬರೆದದ್ದು, ತಪ್ಪುಗಳೆಷ್ಟಿವೆಯೋ ಗೊತ್ತಿಲ್ಲ, ನೀವು ಮೆಚ್ಚಿದ್ದು ನನ್ನ ಖುಷಿ.

@ಸುನಾಥ ಕಾಕ
ಧನ್ಯವಾದಗಳು, ಬೇಂದ್ರೆಯವರ ಬಾಂದಳದಿಂದ ಸುರಿದ ವರ್ಷಧಾರೆಯನ್ನ ಈ ಪುಟ್ಟ ಬೊಗಸೆಯಲ್ಲಿ ಹಿಡಿವ ಚಿಕ್ಕಯತ್ನವಾಗಿತ್ತು. ಏನೂ ಅರಿವಿರದ ದಿನಗಳಲ್ಲಿ ಬರೆದದ್ದು. ಈಗ ಬೇಂದ್ರಯವರ ಗೀತೆಗಳನ್ನ ಬಿಡಿಸಿಡುವುದು ನನ್ನಿಂದ ಅಸಾಧ್ಯವೇ.
ನೀವು ಆ ಕಾರ್ಯವನ್ನ ಚಂದದಿಂದ ನಿರ್ವಹಿಸುತ್ತಿದ್ದೀರಿ ಕಾಕಾ.
ಆ ಕಾರ್ಯವನ್ನ ನೀವೇ ಮಾಡಿದರೆ ಸೊಗಸು ಕೂಡ.
ನೀವು ಬರೆಯಿರಿ, ನನಗೆ ನಿಮ್ಮ ಬರಹಗಳು ತುಂಬ ಇಷ್ಟ.

@ಸಿಮ್ಮಾ
ನಿಮ್ಮಿಷ್ಟದ ಸಾಲುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.


ಎಲ್ಲರ ಗಮನಕ್ಕೆ: ಈ ಲೇಖನದ ಪುಟಗಳಲ್ಲಿ ಅನೇಕ ಮುದ್ರಣ ದೋಷಗಳಿವೆ.
‘ಸಖೀಗೀತ’ ‘ಸಖಿಗೀತ’ ಎಂದಾಗಿದೆ.
‘ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ’ ಎಂಬ ಸಾಲು
‘ಸಖೀ ನಮ್ಮ ಸಖ್ಯದ ಆಖ್ಯಾನ ಬಲು ಮಧುರ’ಎಂಬುದಾಗಿ ಓದಿದ ನೆನಪು.
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹದೆಂದೋ ಜೀವಕಳೆ’ ಎಂಬ ಸಾಲು
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹುದೆಂದೋ ಜೀವಕಳೆ’ ಎಂದಾಗಬೇಕೇನೋ ಎಂಬ ಗುಮಾನಿ. ಇವನ್ನೆಲ್ಲ ತಿದ್ದಲು ಸಧ್ಯಕ್ಕೆ ‘ಸಖೀಗೀತ’ ನನ್ನಲ್ಲಿ ಲಭ್ಯವಿರದ ಕಾರಣ ಈ ಪುಟಗಳಲ್ಲಿ ಇಂತಹ ದೋಷಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿರೆಂದು ಕೇಳಿಕೊಳ್ಳುತ್ತೇನೆ.

July 28, 2008 11:15 AM

July 7, 2008

ಸಿಂಡ್ರೆಲಾ

ಕಹಿಕಾಫಿಯಾಳದಲೂ ನಗು
ನಗು ಬಿರಿವಾಗ
ಏನೋ ನೋವು
ಕಹಿಕಾಫಿಯಾಳ
ಇನ್ನಷ್ಟು ಆಳ
ಮನದಾಳದಂತೆ

ಬಂದವಳು
ಹೊರಟೇ ಹೋದಳು
ಅದೇ ಸಮಯವಲ್ಲ
ಅದೊಂಥರ ವೇಳೆ
ಚಪ್ಪಲಿಯ ಸುಳಿವ
ಬಿಡಲಿಲ್ಲವೀಗಲೂ

ಫ್ರಿಜ್ಜೊಳಗೆ ತಣ್ಣಗೆ
ಕೂತ ಡಬ್ಬಗಳದು ಮಾತೇ ಇಲ್ಲ
ಸಿಟ್ಟಿಂಗ್ ಹಾಲಿನ ಮಧ್ಯೆ
ಅವಳದೇ ಹೊಲಿಗೆ ಯಂತ್ರ
ಕ್ರಿಸ್ ಮಸ್ ಗೆ ಕಾಯುತ್ತಲಿದೆ
ಕ್ರಿಸ್ ಮಸ್ ಟ್ರೀ
ನಾನವಳ ಬರುವ ಕಾಯುವಂತೆ

ನಿನ್ನದೇ ಕರೆಯಾ
ಬೆಳ್ಳಕ್ಕಿ ಮುಗಿಲೆ, ಸಾರಿ
ಸುಪ್ತವಾಗಿ ಮೊಬೈಲ್
ಮಾತಾಡಿದ್ದು
ಅರಿವಾಗಲಿಲ್ಲ

ಕಿಟಕಿಗಾನಿಸಿ ನಿಂತು
ನೋಡುತ್ತೇನೆ
ಮೇಲೆ ಬೆಳ್ಳಕ್ಕಿ ಹಿಂಡು
ಅದರೊಳಗೆ ಅವಳೂ ಒಬ್ಬಳಾ
ಆ ನನ್ನ ಸಿಂಡರೆಲಾ?

ಸುಮ್ಮನೆ ಸಾಗುವ ಸಾಲುಗಳು

*ಗುರುಬಲ*
ಗುರುವೇ ಬಲವಾಗಿ
ಬಲವೇ ಗುರುವಾಗಿ
ಬಂದಾಗಲೇ
ಬಂದಿದ್ದು
ಗುರುಬಲ

*ಅದೃಷ್ಟ*
ಕವಿತೆಯೊಳಗೆ
ಕಳೆದ
ಅದೇ ಬೀಗದ ಕೈ
ಲೇಖನದೊಳಗೆ
ಕೀಲಿಕೈ ಆಗಿ ಸಿಕ್ಕಿದ್ದು!

*ನೆನಪು*
ಹಾದಿಯುದ್ದಕ್ಕೂ
ಹರಿದು
ತೀರದುದ್ದಕ್ಕೂ
ತೀರದ
ಸಂಗಾತಿ

*ಹುಣ್ಣಿಮೆ*
ಮೋಡಮರಗಳ ರಾಶಿ
ತಾರೆಮರಿಗಳ ದಿಂಡು
ಕಣ್ಣುಗಳದೇ ಜಾತ್ರೆ
ಚಂದ್ರಿಕೆಯ ಪಲ್ಲಕ್ಕಿ
ಚಂದ್ರನಿಲ್ಲ!

June 29, 2008

ಭಾವ ಬನ

*ಹೊಂದಾಣಿಕೆ*
ಅವನ ಹೊಸ ಮನೆ
ನನಗದು ಹಳೆಯ ಅಂಗಳ
ಅವನ ಹಳೆಮನ
ಹೊಸ ಕಿನ್ನರಿಯರ ಕಿನ್ನರಿ
ಇದು ಅವನದೇ ಹೊಸಬಿಂಬ
ನಾನು ಹಳೆಯ ಕನ್ನಡಿ

*ವಿಪರ್ಯಾಸ*
ಅವನ ಕಾಫಿತಳದಿಳಿದು
ಕರಗಿದ ಸಕ್ಕರೆ
ಇವನ ಟೀಯುಗುಳಿದ
ಹಬೆಯಿಂದೆದ್ದು ಬಂದದ್ದು!



*ಸಂಬಂಧ*
ಕಳಚಿಕೊಂಡಷ್ಟೂ ಕೂಡಿ
ಕೂಡಿದ್ದೆಲ್ಲ ಕಳಚಿ
ಕಳೆದುಕೂಡಿ
ಕೂಡಿಕಳೆದು
ಕಳೆದದ್ದನ್ನೇ ಕಳೆದು
ಕೂಡಿಸಿದ್ದನ್ನೇ ಕೂಡಿಸಿ
ಕಾಯುತ್ತ ಕೊಲ್ಲುವ
ಕಾಗುಣಿತಗಣಿತ ಕೊಂಡಿ

*ನನ್ನ ಸಾಲು*
ಹೊಸಸಾಲಿಗೂ ಬೇಕು
ಓಬಿರಾಯನ ಉಪಮಾ
ಹಳೆಯರೂಪಕಕ್ಕೆ
ಹೊಸತನದ ಟೀಕೆ
ಓಬಿರಾಯಗೆ ತೃಪ್ತಿ
ಕವಿಗಳಿಗೊಂದಷ್ಟು ಸಾಲು ದಕ್ಕಿದ್ದಕ್ಕೆ

June 12, 2008

ಬೆಳದಿಂಗಳ ಕರೆಯೋಲೆ...

ಅವನು ಯಾವಾಗಲೂ ಹಾಗೆಯೇ... ಮುಸ್ಸಂಜೆಯ ಚಾದರಹೊದ್ದು ಮಲಗಿಬಿಡುತ್ತಾನೆ. ಅವನಿಲ್ಲ ಅಂದರೆ ನಮಗೇನು ಬೆಳಕೇ ದಕ್ಕದೋ..? ಇವನಿದ್ದಾನಲ್ಲಾ .....ಒಂಟಿಜೀವದ ನಿಟ್ಟುಸಿರೊಂದು ಮನೆಯಂಗಳದಲ್ಲಿ ಲೀನವಾಗುತ್ತದೆ.
ಮುಸ್ಸಂಜೆಯ ಮನೆಯೊಳಗೆ ದೀಪವನ್ನಿಟ್ಟು
"ಬಿದಿಗೆ ಚಂದ್ರ ಬಂದ ನೋಡು....ದೀಪ ಹಚ್ಚಿದಂತೆ ಜೋಡು...ಯಾರ ಮನೆಯು ಅಲ್ಲಿ ಇಹುದೋ ಯಾರು ಬಲ್ಲರು..."
ಗುನುಗುಡುತ್ತ ಕಿಟಕಿಯಾಚೆಗಿನ ಆಗಸ ನೋಡಿದರೆ....
"ಶಶಿಬಿಂದುಧರ...ನಸುನಗೆಯ ಮಧುರ ಮಂದಾರ ಗಂಧ ಚೆಲ್ಲಿ..."
ಹತ್ತು ವರ್ಷಗಳ ಹಿಂದೆ ಅವನೊಡನೆ ಆ ಬೆಟ್ಟದ ಮೇಲಿನ ಬಿಳಲು ಮರದಾಚೆಯ ಕಲ್ಲಿನಆಲಯವೊಂದಕ್ಕೆ ಹೋಗಿ ಬಂದ ನೆನಪು ಪ್ರತಿಹುಣ್ಣಿಮೆಯಲ್ಲೂ ಕಾಡುತ್ತದೆ. ಪ್ರತಿ ಪೌರ್ಣಿಮೆಗೂ ಒಂದೊಂದು ಹೊಸಹಾಡು ಆ ದಿಕ್ಕಿನಿಂದ ಹರಿದುಬರುತ್ತೆದೆ. ಹಾಗಾದರೆ ಅವಳಿನ್ನೂ ಇದ್ದಾಳೆ. ಇರಲೇಬೇಕು, ಹಾಡು ಕೇಳಿಸುತ್ತಿದೆಯಲ್ಲಾ!
ಹುಣ್ಣಿಮೆಯ ಚಂದ್ರನ ಸುತ್ತ ಹಾಡೊಂದು ಹಸನಾಗಿ ಹರಿದಾಡುತ್ತದೆ. ದೂರದ ಗುಡ್ಡದ ಮೇಲಿನ ಆಗಸದಜೋಪಡಿಯೊಂದರಲ್ಲಿ ಲಾಟೀನು ತೂಗಾಡುತ್ತಿದೆ. ಹೌದು..ಅವಳೇ...ಅವಳೇ ಸರಿ...ಹಾಡುತ್ತಿದ್ದಾಳೆ, ಲಾಟಿನಿನ ಬೆಳಕು ಅವಳನ್ನೆಲ್ಲ ಮುತ್ತಿಕೊಂಡಿದೆ . ಹೌದು..ಅವಳೇ..ತುಟಿಬಿರಿಯದೆಯೇನಗುತ್ತಿದ್ದಾಳೆ. ತುಸುಬೆಳಕಿನಲ್ಲಿ ನಸುನಗುವೊಂದು ಹಾಸಿ ಹಾಯ್ದುಹೋಗುತ್ತದೆ.
ಹುಣ್ಣಿಮೆಯೊಂದು ಬಂದು ಮನೆಯಂಗಳದಲ್ಲಿ ಚೆಲ್ಲಪಿಲ್ಲಿಯಾಗಿ ಮನಸುಬಂದಲೆಲ್ಲ ಹುಚ್ಚಾಗಿ ಹರವಿಕೊಂಡಿದೆ. ಇವತ್ತು ಬೆಳದಿಂಗಳು! ಬಂದು ನಮ್ಮನೆಲ್ಲ ಕರೆಯುತ್ತಿದೆ. ಬೆಳದಿಂಗಳಿಗೇಕೋ ಬೇಸರವಂತೆ ಬರೀ ನೆನಪು ಕನಸುಗಳ ನಡುವಿದ್ದು. ಬೆಳದಿಂಗಳು ಕಾಡುತ್ತದೆ "ಶ್ರಾವಣದ ಮಳೆಯಲ್ಲಿ ನೆನೆದಾಡಬೇಕು. ಬಂದು ಬೆಚ್ಚಗೆ ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗಬೇಕು" ಅಂತ.
ನಸುಗತ್ತಲ ಹಾದಿಯಲ್ಲೇ ಅವಳನ್ನು ಶ್ರಾವಣದ ಮಳೆಯತ್ತ ಕರೆದೊಯ್ಯುತ್ತಿದ್ದೇನೆ. ಅಮ್ಮನ ಮಡಿಲು ಕೈಬೀಸಿ ಕರೆಯುತ್ತಿದೆ. ನಸುಬೆಳಕಿನ ಹಾದಿ. ಕೈಯ್ಯಲ್ಲೊಂದು ಬೆಳಗುವ ಹಣತೆಯಿದೆ. ಜೊತೆ ಅವಳೂ ಬೀರಿದ ಬೆಳಕು. ತಡವುತ್ತ ಎಡವುತ್ತ ಹಾದಿ ಹುಡುಕುತ್ತಿದ್ದೇನೆ. ಅಲ್ಲಿ ತುಸು ಮುಂದೆ ನನ್ನವರೆಂಬ ನೀವೆಲ್ಲ ಇದ್ದೀರಿ .ಪ್ರತಿ ಕೈಯ್ಯೊಳಗೂ ಒಂದೊಂದು ಹಣತೆ, ಇನ್ನಷ್ಟು ಬೆಳಕು. ಧೈರ್ಯ ಉಮ್ಮಳಿಸಿಬಂದು ನಿಮ್ಮೆಡೆಗೆ ಧಾವಿಸುತ್ತೇನೆ.ಮುಂದೆ ಕಾಡು, ಬೆಳದಿಂಗಳು ಹಿಂದೆ ಹಿಂದೆ. ಈಗ ನಿಮ್ಮೆಲ್ಲರೊಟ್ಟಿಗೆ ಶ್ರಾವಣದ ಮಳೆಯಲ್ಲಿ ತೋಯ್ದು ಅಮ್ಮನ ಮಡಿಲಿಗೆ ಧಾವಿಸುತ್ತೇನೆ. ಅಮ್ಮನ ಕೈ ಮಗುವಿನ ಮನವನ್ನು ಮೃದುವಾಗಿ ನೇವರಿಸುತ್ತದೆ. ಬೆಳದಿಂಗಳು ಮುಗ್ಢವಾಗಿ ಅಮ್ಮನನ್ನೇ ನೋಡುತ್ತದೆ. ಮನಸ್ಸು ಹಗುರಾಗಿ ನಿಟ್ಟುಸಿರೊಂದು ಬೆಳದಿಂಗಳೊಳಗೆ ಕರಗುತ್ತದೆ. ಶ್ರಾವಣದ ಮಳೆಯಂಗಳದೆದುರು ನಾವೆಲ್ಲ! ಅಮ್ಮ ಅಲ್ಲಿಯೇ ನಿಂತು ನಮಗಾಗಿ ಕಾಯುತ್ತಿದ್ದಾಳೆ...
ಈಗ ಎಲ್ಲರ ಮೊಗದಲ್ಲೂ ನಗು. ಬೆಳದಿಂಗಳು ಮುಂದಕ್ಕೆ ಧಾವಿಸಿ ನಮ್ಮನೆಲ್ಲ ಕರೆಯುತ್ತದೆ "ಬನ್ನಿ, ಬನ್ನಿ..." ಎನ್ನುತ್ತ ಸುತ್ತಲಿನ ಶ್ರಾವಣದಲ್ಲಿ ಹರವಿಕೊಂಡು ಮಳೆಯಮಡಿಲಲ್ಲಿ ನೆನಪು ಕನಸುಗಳ ನಡುವೆ ಬೆರೆತುಹೋಗುತ್ತದೆ.

June 7, 2008

ಭಾವ ಬನ

*ಆಕಸ್ಮಿಕ*

ನಾ ಹೋದಲ್ಲೆಲ್ಲ
ನೀ ನೆರಳಾಗಿ
ನಿಲ್ಲುವುದು!

ಬಿಸಿಲು ಬೆನ್ನುಬಿಡದೇ
ನನ್ನ ಸುತ್ತ
ನಿನ್ನಾಡಿಸುವುದು!

ತಂಪನ್ನರಸಿ ನೀ
ನನ್ನೆಡೆಗೆ
ವಾಲುವುದು!
________________


*ಆಘಾತ*


ನನ್ನದೇ ನೆನಪಲ್ಲಿ
ನೀ ನನ್ನ ಮರೆತಿದ್ದು!
ನಿನ್ನ ಮರೆತಾದ
ಮೇಲೆ
ನೀನೆದುರು ಕಂಡಿದ್ದು!
_______________


*ಅಸೂಯೆ*


ಅಂದು ನೀ ತೋರಿಸಿದ
ಅಸ್ತವಾಗುತಲಿದ್ದ
ಅದೇ ಸೂರ್ಯ
ಉದಯವಾಗುವುದ ಕಂಡು
ನಾನಿಂದು ನಕ್ಕಾಗ!
_______________


*ಏಕಾಂತ*

ಗುಂಪೊಳಗೆ ನಾ
ಹಾಯಾಗಿರುವ
ನೀ ಕಾಡದ ಹೊತ್ತು
_______________

March 20, 2008

ಮರಳುವ ಮೊದಲು

ನಾ ಕಲಿತ ವಿಶ್ವವಿದ್ಯಾಲಯದ ನೆನಪು ಇಂದು ಮರುಕಳಿಸುತ್ತಿದೆ. ಸುಂದರ ಮುಂಜಾವು. ತಿಳಿಗುಲಾಬಿ ಬಣ್ಣದ ಅಂಚಿಗೆ ಹಾಲಿನ ಬಣ್ಣದ ಮೈಯ್ಯುಳ್ಳ ಸೀರೆಯೊಂದನ್ನು ಕಷ್ಟಪಟ್ಟು ಸುತ್ತಿಕೊಂಡು ಹೊರಟಾಗ ಯಾವುದೋ ಕಂಪನ ಮೈಯನ್ನ ಆವರಿಸಿತ್ತು. ತಿರು ತಿರುಗಿ ನಕ್ಕ ಹಾಸ್ಟೆಲ್ ರೂಂ ಮೇಟ್ ಹೇಳಿದ್ದಳು "ಸಿಂಪಲ್ಲಾಗೇ ಸೆಳೆದುಬಿಡ್ತೀಯ" ಅಂತ ನಕ್ಕಿದ್ದಳು. ಅವಳನ್ನೊಮ್ಮೆ ಗುರಾಯಿಸಿ ‘ತಮಾಷೆ ಸಾಕು’ ಅಂತ ನಸುನಕ್ಕು ಸೆಮಿನಾರ್ ಬಗೆಗಿನ ನನ್ನ ಟೆನ್ಷನ್ ಅವಳೆದುರು ಹೇಳಿಕೊಂಡು ಸುಮ್ಮನೆ ನಡೆದಿದ್ದೆ.
ವಿಶ್ವವಿದ್ಯಾಲಯದಲ್ಲಿನ ಗೆಸ್ಟ್ ಹೌಸ್ ಪಕ್ಕದ ಕಾನ್ಫರೆನ್ಸ್ ಹಾಲ್ ಭಾರತದ ಸುಮಾರು ೬೦ ವಿಶ್ವವಿದ್ಯಾಲಯಗಳಿಂದ ನೆರೆದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಧ್ಯಾರ್ಥಿಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು.
ನಮ್ಮ ವಿಶ್ವವಿಧ್ಯಾಲಯದಿಂದ ‘ಜ್ಯೂನಿಯರ್ ಜಿಯಾಗ್ರಫರ್’ ಅಂತ ಆಯ್ಕೆಯಾಗಿದ್ದ ನಾನು ಕಾನ್ಫರೆನ್ಸಿನ ಮೊದಲ ದಿನವಾದ ಅಂದು ಸೆಮಿನಾರ್ ಕೊಡುವುದಿತ್ತು. ಅದೆಷ್ಟೋ ದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಸೆಮಿನಾರ್ ಅರ್ಧಗಂಟೆಯಲ್ಲಿ ಮುಗಿದೇ ಹೋಗಿದ್ದು ಮನ್ಸೆಲ್ಲ ಖಾಲಿ ಖಾಲಿ ಅನಿಸಿತ್ತಾದರೂ ‘ಹೇಗಿತ್ತೋ ಏನೋ’ ಎಂದು ಭಯವೂ ಸುತ್ತಿಕೊಳ್ಳುತ್ತಲಿತ್ತು. ಸೆಮಿನಾರ್ಗೆ ನನ್ನನ್ನು ಸಿದ್ಧಗೊಳಿಸಿದ ನನ್ನ ಪ್ರೀತಿಯ ಗುರುವರ್ಯರ ಕಣ್ಣಿನ ಪ್ರೀತಿಯನ್ನ ಅರಸಿ ಅವರು ಸ್ಟೇಜಿನ ಮೇಲಿದ್ದುದರಿಂದ ದೂರದಿಂದಲೆ ಮುಗುಳ್ನಗೆಯೊಂದರಿಂದ ವಂದಿಸಿ ಚಹದ ಕಪ್ ಒಂದನ್ನು ಕೈಯಲ್ಲಿ ಹಿಡಿದು ಕಾನ್ಫರೆನ್ಸ್ ಹಾಲ್ ಇಂದ ಹೊರಗೆ ಬಂದು ಮೆಟ್ಟಿಲೊಂದರ ಮೇಲೆ ಕುಳಿತೆ. ಅರ್ಧಗಂಟೆಕಾಲ ಕಟ್ಟಿಹೋದಂತಿದ್ದ ಉಸಿರಿಗೆ ಸ್ವಾತಂತ್ರ್ಯ ಸಿಕ್ಕಿತ್ತು .
ಆಗಲೇ ಅವನು ಬಂದು ಎಷ್ಟೋ ದಿನದ ಪರಿಚಯವೆಂಬಂತೆ ಪಕ್ಕಕ್ಕೆ ಕುಳಿತಿದ್ದ. "ಸೆಮಿನಾರ್ ಚೆನ್ನಾಗಿತ್ತು" ಅಂದ. ಉಸಿರು ತಾಕುವಷ್ಟು ಪಕ್ಕ ಬಂದು ಕುಳಿತಿದ್ದವನಿಗೆ ಉತ್ತರಿಸಲು ಸ್ವಲ್ಪ ಮುಜುಗರವಾಯ್ತಾದರೂ ಮುಗುಳ್ನಕ್ಕೆ. ಕೊಂಚ ಭಯ ಕೂಡ. ಆತ್ಮೀಯತೆ ಕೂಡ ಇಣುಕಲಿಲ್ಲ ಅವನು ನನಗೆ ತೋರಿಸಿದಷ್ಟು .ವಿಷಯವೆಂದರೆ ಅವನು ಭಾರತೀಯನಾಗಿರಲಿಲ್ಲ,

ತಾನು ಭೂಗೋಳಶಾಸ್ತ್ರ ವಿಷಯದ ರಿಸರ್ಚ್ ವಿಧ್ಯಾರ್ಥಿಯಾಗಿದ್ದು ನಾನಂದು ಸೆಮಿನಾರ್ ಕೊಟ್ಟ ವಿಷಯವೇ ಅವನ ರಿಸರ್ಚಿನ ವಸ್ತುವೆಂದೂ ತಿಳಿಸಿದ. ಆ ವಿಷಯದ ಅಧ್ಯಯನದ ಸಲುವಾಗಿ ಕಿರು ಅವಧಿಗಾಗಿ ತಾನು ಭಾರತಕ್ಕೆ ಬಂದಿರುವುದಾಗಿಯೂ ಹೇಳಿದನಲ್ಲದೆ ಅದೇ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿದ ಅವನ ಮಾತುಗಳಿಗೆ ಸ್ಪಂಧಿಸುವಷ್ಟು ಜ್ಞಾನ ನನ್ನದಾಗಿರಲಿಲ್ಲ. ಅಲ್ಲದೆ ಐದು ನಿಮಿಷಗಳ ಕಾಲ ಉಸಿರಾಡಿಕೊಳ್ಳಲು ಹೊರಬಂದವಳನ್ನು ಅವನು ಹದಿನೈದು ನಿಮಿಷಗಳ ಕಾಲ ಹೊರಗೆ ನಿಲ್ಲಿಸಿಬಿಟ್ಟಿದ್ದ. ಒಳಗೊಳಗೇ ಚಡಪಡಿಸುತ್ತಿದ್ದವಳನ್ನು ಅರ್ಥೈಸಿಕೊಂಡವನಂತೆ ಮುಗುಳ್ನಕ್ಕು ‘ಕಾರ್ಯಕ್ರಮದತ್ತ ತೆರಳೋಣ ಬಾ’ ಎಂದವನೇ ಕಾನ್ಫರೆನ್ಸ್ ಹಾಲ್ ಒಳಗೆ ನುಸುಳಿ ಮಾಯವಾಗಿದ್ದ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅಂತೂ ಹತ್ತು ದಿನಗಳ ವರ್ಕ್ ಶಾಪ್ ಮುಗಿಯುವುದರೊಳಗೆ ಹಿಂದೆಯೇ ಸುಳಿದಾಡುತ್ತ ಮುಗುಳ್ನಗುತ್ತಿದ್ದವನು ತನ್ನ ಮನದಿಚ್ಛೆಯನ್ನೆಲ್ಲ ಮುಂದಿಟ್ಟು ಕ್ರಮೇಣ ಮನವನಾವರಿಸಿಕೊಂಡುಬಿಟ್ಟಿದ್ದ. ಆರು ತಿಂಗಳು ಕಾಲ ನಮ್ಮ ಡಿಪಾರ್ಟ್ ಮೆಂಟಿನಲ್ಲಿಯೇ ರಿಸರ್ಚ್ ಸಲುವಾಗಿ ನಿಂತಿದ್ದ. ನನ್ನಿಷ್ಟದ ವಿಷಯದ ಬಗ್ಗೆ ಅವನಿಗಿರುವ ಅತೀವ ಜ್ಞಾನ ಹಾಗೂ ಆಸಕ್ತಿ ನನ್ನನ್ನು ಅವನೊಂದಿಗೆ ಕಟ್ಟಿಹಾಕಿಬಿಟ್ಟಿತ್ತು. ನನ್ನ ಜಾತಿಯ ಯಾವ ಹುಡುಗನಿಗೆ ಇವನು ಕಮ್ಮಿ? ಅಂತನಿಸಿಬಿಟ್ಟಿದ್ದ. ಎಲ್ಲಕ್ಕೂ ಮಿಗಿಲಾಗಿ ಅವನ ಸರಳತೆ, ಒಳ್ಳೆಯತನ ನನ್ನನ್ನು ಪೂರ್ತಿ ನುಂಗಿಕೊಂಡುಬಿಟ್ಟಿತ್ತು.
ಮನೆಯಲ್ಲಿ ವಿಷಯವಿಟ್ಟೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದರೊಳಗೆ. ಮನೆಯಲ್ಲಿ ಯಾರೂ ಒಪ್ಪಲಿಲ್ಲ ಮಾಂಸ ತಿನ್ನುವ ಅದರಲ್ಲೂ ಪರದೇಸಿಗನೊಬ್ಬನನ್ನು ಮದುವೆಯಾಗಲು.
ಅವನು ತನ್ನ ದೇಶಕ್ಕೆ ಹೊರಟು ನಿಂತಾಗ ನಾನವನೊಂದಿಗೆ ಹೊರಟು ನಿಂತದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವನೂ ಸಹ ನನ್ನನ್ನು ಬಿಟ್ಟು ಹೋಗಲಾರೆನೆಂದು ಹಠ ತೊಟ್ಟಿದ್ದ. ಏನೇನೋ ಕೊಸರಾಡಿ ಪಾಸ್ಪೋರ್ಟ್ ಅಲ್ಲಿ ಅವನ ಬಾಳಸಂಗಾತಿಯೆನಿಸಿಕೊಂಡ ನಾನು ವಿಸಾ ಪಡೆದವಳು, ನನ್ನವರು ಎಂಬ ಎಲ್ಲರನ್ನು ತೊರೆದು ಅವನೊಂದಿಗೆ ಹಾರಿ ಅವನ ನೆಲದಲ್ಲಿ ಬಂದಿಳಿದಿದ್ದೆ.

ಈ ಮಾತಿಗೆ ಎರಡು ವರ್ಷಗಳೇ ಸಂದುಹೋದವು. ಇಂದು ಬೆಳಿಗ್ಗೆ ಅವನಿಂದ ಡಿವೋರ್ಸ್ ಸಿಕ್ಕಿತು. ಕಾರಣ ನೀವಂದುಕೊಂಡಂತೆ ಅವನಿಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇಲ್ಲ. ಭಾರತೀಯಳಾಗಿ ಹೇಳಬೇಕೆಂದರೆ ಅವನು "ಶ್ರೀರಾಮಚಂದ್ರ."

ಮೊದ ಮೊದಲು ಪ್ರೀತಿಯೆದುರು ಕೊರತೆಗಳ್ಯಾವುವೂ ಕಾಣಿಸಲಿಲ್ಲ. ಜೀವನ ನಾನಂದುಕೊಂಡಷ್ಟು ಕಷ್ಟವಿಲ್ಲವೆನಿಸಿದ್ದಂತೂ ನಿಜ. ಆದರೆ ನಿಜವಾದ ಕೊರತೆಯೊಂದಿತ್ತು ನನಗೆ ನಾನೇ ತಂದಿತ್ತುಕೊಂಡಿದ್ದು, ನನ್ನ ಪ್ರೀತಿಯ ಕುಟುಂಬವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ, ಅವರೊಂದಿಗೆ ಫೋನಾಯಿಸಿ ಮಾತನಾಡುವ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದು ದಿನ ಕಳೆದ ಹಾಗೆ ಬೃಹದ್ ಕೊರತೆಯಾಗಿ ನನ್ನನ್ನ ನರಳಿಸತೊಡಗಿದ್ದು, ಎಷ್ಟೆಂದರೆ ಹುಚ್ಚಿಯಾಗಿಬಿಡುವಷ್ಟು.

ಕಾರಣಗಳು ವೈಯಕ್ತಿಕ. ಅವು ನಮ್ಮಿಬ್ಬರ ವೈಯಕ್ತಿಕ ಅಂತಲೂ ಅನಿಸೋಲ್ಲ. ನನ್ನೊಬ್ಬಳ ವೈಯಕ್ತಿಕ ಅನಿಸುತ್ತವೆ. ಅವನು ಇನ್ನೂ ನನ್ನನ್ನು ಆರಾಧಿಸುತ್ತಾನೆ ಅಂತ ಗೊತ್ತಿದೆ. ನನ್ನಲೂ ಅಷ್ಟೆ, ಗೋಪುರದಷ್ಟು ಪ್ರೀತಿಯಿದೆ ಅವನಿಗಾಗಿ. ಕಳಚಿರದ ಕೊಂಡಿಯನ್ನು ಕಡಿದುಕೊಂಡು ಬರಬೇಕಿದೆ.
ಅಪ್ಪ-ಅಮ್ಮನ ನೆನಪು ಬೆಳಕಿನ ಕಿರಣಗಳ ಜೊತೆ ಹುಟ್ಟಿಕೊಂಡರೆ ಚಂದ್ರ ಮಾಯುವತನಕವೂ ಮಾಗುವುದಿಲ್ಲ. ಸಂಜೆ ದೇವರಿಗೆ ನಾನಂಟಿಸಿದ ದೀಪ ಅವನು ಬಂದ ತಕ್ಷಣ ಅವನ ಕೈಲಿರುವ ಫೈಲು ಅಪ್ಪಳಿಸುವ ರಭಸಕ್ಕೆ ಮುರುಟಿ ಆರಿ ಹೋದ ಕಮಟು ನನ್ನೊಳಗಿಳಿದು ಮುಸು ಮುಸು ಅಳುತ್ತದೆ. ವಾರಾಂತ್ಯಗಳಲ್ಲಿ ಅವನ ತಂದೆ-ತಾಯಿಗಳ ಜೊತೆ ಅವರ ಮನೆಯಲ್ಲಿ ಕಳೆಯುವುದು ನರಕ ಅಂತ ನಾನೇನೂ ಹೇಳುತ್ತಿಲ್ಲ. ಮೀಟಿನ ಕಮಟು ನನ್ನ ತರಕಾರಿಗಳ ರುಚಿಯನ್ನೂ ನುಂಗಿ ವಾರಾಂತ್ಯ ಪೂರ್ತಿ ಉಪವಾಸ ನರಳುತ್ತೇನೆ. ಸದಾ ಊಟದ ತಟ್ಟೆಯೊಂದಿಗೆ ಚಾಕು-ಫೋರ್ಕುಗಳನ್ನು ನೋಡುವಾಗ ಅಜ್ಜನ ಊಟದ ಬಟ್ಟಲಿನ ಎಡಗಡೆಯಲ್ಲಿರುತ್ತಿದ್ದ ತೀರ್ಥದ ತಟ್ಟೆಚಮಚಗಳು ಕಣ್ಣೆದುರು ಬಂದು ಕಂಬನಿ ಹನಿಸುತ್ತವೆ.
`ಪ್ರೀತಿ ಗೆಲ್ಲುತ್ತದೆ' ಎಂಬ ಮಾತನ್ನು ನಂಬಿ ಎಲ್ಲರನ್ನು ತೊರೆದು ಬಂದಿದ್ದೆ. ಈಗನ್ನಿಸುತ್ತದೆ ಪ್ರೀತಿಯನ್ನು ಗೆದ್ದರೆ ಎಲ್ಲವನ್ನೂ ಸೋಲಬೇಕಾಗುತ್ತದೆ ಅಂತ.
ಅವನು ನನ್ನೊಡನೆ ಬರಲಾರ, ಅವನಿದ್ದರೆ ನನ್ನವರು ನನ್ನನ್ನು ಸುತಾರಾಂ ಸೇರಿಸೋಲ್ಲ. ಇದೇ ಕಾರಣಗಳಿಂದ ಹಿಂದೊಮ್ಮೆ ಹುಟ್ಟಿದ ಮಾತು ಇಂದು ಡಿವೋರ್ಸ್ ಅಲ್ಲಿ ಅಂತ್ಯಗೊಂಡಿತು. ಈಗೊಂತರ ಮನುಷ್ಯ ಮುಟ್ಟಿದ ಗುಬ್ಬಿಯ ಹಾಗಾಗಿ ಬಿಟ್ಟಿದ್ದೇನಾದರೂ ಮರಳಿ ಬಂದು ನನ್ನವರನ್ನೆಲ್ಲ ಕೂಡಿಕೊಳ್ಳುವ ತವಕ ಹೆಚ್ಚುತ್ತಿದೆ. ನನ್ನವರೆಲ್ಲ ನನ್ನ ಸೇರಿಸಿಕೊಂಡಾರು ಎಂಬೊಂದು ಚಿಕ್ಕ ಆಸೆಯಿದೆ. ಅವರನ್ನೆಲ್ಲ ಬರಸೆಳೆದು ಅಪ್ಪಿಕೊಂಡು ಕ್ಷಮೆಯಾಚಿಸಿ ಬಿಕ್ಕುವ ಕನಸೊಂದಿದೆ.
ನನ್ನ ನೆಲದಲ್ಲಿಯೇ ಹೋಗಿಳಿದು ಆ ಮಣ್ಣಿನಲ್ಲಿಯೇ ಮಲ್ಲಿಗೆ ಬಳ್ಳಿಯೊಂದನ್ನು ನೆಟ್ಟು ಹೂ ಬಿಡಿಸಿ ನನ್ನವರನ್ನೆಲ್ಲ ಕರೆದು ತೋರಿಸಿ ನಗುವ ಹಂಬಲ ವಿಪರೀತ ಕಾಡುತ್ತಿದೆ. ಎಷ್ಟೆಂದರೆ ನನ್ನ ಬದುಕಾದ ನನ್ನ ಡ್ಯಾನಿಯೊ ಎಂಬ ಮರುಳು ಹುಡುಗನನ್ನು ತೊರೆದು ಬರುವಷ್ಟು.

ಡಿವೋರ್ಸ್ ಸಿಕ್ಕ ಮೆಲೂ ಅವನು ನನ್ನನ್ನು ಕಾಡುವಂತೆ ನಿಟ್ಟುಸಿರುಬಿಡುತ್ತಿದ್ದಾನೆ. ಕೈಯೊಡ್ಡಿ ಬೇಡಿಕೊಳ್ಳುತ್ತಿದ್ದಾನೆ. ಕಣ್ನೋಟದಲ್ಲೇ ‘ಬಿಟ್ಟು ಹೋಗ್ತೀಯಾ?’ ಅಂತ ಗೋಗರೆಯುತ್ತಾನೆ.ನನ್ನನ್ನು ಅಲುಗಿಸಿ ಅಲುಗಿಸಿ ಕೇಳುತ್ತಾನೆ ‘ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿದ್ದೇನೆ ಹೇಳು, ತಿದ್ದಿಕೊಳ್ಳುತ್ತೇನೆ’ ಅಂತ. ಬಾಯಿಬಿಟ್ಟು ಹೇಗೆ ಹೇಳಲಿ ನಿನ್ನ ಬದುಕಿನ ರೀತಿ-ನೀತಿಗಳು ನಂಗಿಷ್ಟವಾಗ್ತಿಲ್ಲ’ ಅಂತ! ‘ಮಾಂಸ ತಿನ್ನೋದು ಡಿವೋರ್ಸ್ ಮಾಡುವಂಥ ತಪ್ಪಾ’ ಅಂತ ನನ್ನನ್ನ ಕೆಳಗಿಟ್ಟು ನೋಡಿದರೆ! ‘ನಂಗೆ ನನ್ನವರೆಲ್ಲರ ಜೊತೆಯಲ್ಲಿರಬೇಕೆನ್ನಿಸುತ್ತೆ, ಬರ್ತೀಯಾ?’ ಅಂತ ಮಾತ್ರ ಕೇಳಿ ಸುಮ್ಮನಾಗುತ್ತೇನೆ. ಕುಳಿತಲ್ಲೇ ಕೂರಲಾರದೇ ಚಡಪಡಿಸಿ ಕೈಯಲ್ಲಿನ ಫೈಲನ್ನೇ ಮುಖಕ್ಕೆ ಮುಚ್ಚಿಕೊಳ್ಳುತ್ತಾನೆ, ಹಾಗಾಗಿ ಅವನ ಕಣ್ಣೀರು ನನಗೆ ಕಾಣಿಸುತ್ತಿಲ್ಲ.
ಸಮಂಜಸ ಕಾರಣವೇ ಇಲ್ಲದಾಗ್ಯೂ ಸುಳ್ಳು ಕಾರಣ ನೀಡಿ ಡಿವೋರ್ಸ್ ಪಡೆವಾಗ ತಪ್ಪು ತನ್ನದಿದೆ ಅಂತ ನನಗಾಗಿ ಒಪ್ಪಿಕೊಂಡವನ ಮುಖ ಎದುರು ಬಂದು ನನ್ನ ಕೆನ್ನೆಗೇ ನಾನು ನಾಲ್ಕು ರಪ ರಪನೆ ಬಾರಿಸಿಕೊಳ್ಳುವಂಥ ಗಿಲ್ಟ್ ಕಾಡುತ್ತದೆ. ಅಲ್ಲೂ ನನ್ನ ಪರವಾಗಿದ್ದು ನನ್ನನ್ನು ತನ್ನೊಳಗೆ ಉಳಿಸಿಕೊಂಡವನು ಗ್ರೇಟ್ ಅನಿಸಿ ಅವನೊಳಗೆ ಹುದುಗಿ ಕಳೆದುಹೋಗೋಣವೆನಿಸಿದರೂ ನನ್ನೂರು ನನ್ನವರೆಲ್ಲ ಎದುರಿಗೆ ಬಂದು ಕೈಗಳನ್ನು ಚಾಚಿ ನನ್ನನ್ನು ತಮ್ಮೆಡೆಗೆ ಬಾಚಿಕೊಂಡಂತೆ ಭಾಸವಾಗುತ್ತದೆ.

ತೆರಳಲಿದ್ದೇನೆ ನನ್ನ ನಾಡಿಗೆ.ಇದೇ ತಿಂಗಳು ೨೮ನೆಯ ತಾರೀಖಿನಂದು ನಿತ್ಯವೂ ನನ್ನ ದೇಶಕ್ಕೆ ಮರಳುವ ವಿಮಾನವೊಂದು ನನಗಾಗಿ ಕಾಯುತ್ತಿರುತ್ತದೆ ಎನಿಸುತ್ತಿದೆ.

ಸಮಯಗಳ ಅಂತರದಲ್ಲಿ ಕಳೆದುಕೊಂಡ ನನ್ನವರೆಲ್ಲರೂ ನನಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಮೇಲೆ ಅಪ್ಪ-ಅಮ್ಮರೊಂದಿಗೆ ನಿನ್ನೆ ಮಾತಾಡಿದೆ.
ಅಮ್ಮ ಮಾಡುವ ತಂಬುಳಿ, ಅಪ್ಪನೊಂದಿಗೆ ಹಸಿರು ಹಾಸುಗಳಲ್ಲಿ ಸುತ್ತಾಟಗಳ ಕನವರಿಕೆಯಲ್ಲಿ ನನ್ನ ಹುಡುಗನ ಮಾತುಗಳನ್ನು ಮುಳುಗಿಸಿ ಕೇಳಿಯೂ ಕೇಳದವಳಂತೆ ನಾ ಬೆಳೆದ ಮಣ್ಣಿನ ವಾಸನೆಯನ್ನರಸಿ ಹೊರಟು ಬಿಡುತ್ತಿದ್ದೇನೆ. ಕೊನೆಯದಾಗಿ ಅವನಿಗೂ ಹೇಳಿದ್ದೇನೆ.
"ನನ್ನೊಡನೆಯೇ ಬದುಕುವಾಸೆಯಿದ್ದರೆ ನನ್ನ ನೆಲಕ್ಕೇ ಬಾ, ನಾ ಮಲ್ಲಿಗೆ ಬಳ್ಳಿ ನೆಡಲಿದ್ದೇನೆ ಅಲ್ಲಿ, ನೀನು ನೀರೆರೆಯಬಹುದು. ನೆಟ್ಟು ಹೂ ಬಿಟ್ಟಿದ್ದನ್ನು ನೋಡಿ ಇಬ್ಬರೂ ನಗಬಹುದು. ನಾವು ನಕ್ಕಿದ್ದನ್ನು ನೋಡುತ್ತ ನೋಡುತ್ತ ಅಪ್ಪ-ಅಮ್ಮ ಕ್ರಮೇಣ ನಿನ್ನ ಒಪ್ಪಿಕೊಳ್ಳಬಹುದು" ಅಂತ. ಅಷ್ಟೇ ಅಲ್ಲ ಹೀಗೂ ಹೇಳಿದ್ದೇನೆ " ನಂಗೆ ನೀನಿಲ್ಲದೆ ಬೇರೆ ಬದುಕಿಲ್ಲ ಕಣೋ...." ಅಂತ.
‘ಭೂಮಿ ಗುಂಡಗಿದೆ, ಹೇಗೆ ಬಂದರೂ ಸಿಕ್ಕೇ ಸಿಗುತ್ತೇವೆ ಇನ್ನೊಮ್ಮೆ’ ಅಂತ ನಾ ಹೇಳಿದರೆ "Nope, Earth is Geoid " ಅಂತ ಹೇಳಿಕೊಂಡು ಯಾವತ್ತಿನಂತೆ ನಗಲಾರದ ಸ್ಥಿತಿ ಇಬ್ಬರದೂ.

ನಾ ನೆಟ್ಟ ಬಳ್ಳಿಯ ಮಲ್ಲಿಗೆ ಕಂಪು ಅವನನ್ನು ಆವರಿಸಿ ನನ್ನೆಡೆಗೆ ಎಳೆದುಕೊಂಡು ಬರಬೇಕು ಅಂಥ ಮಲ್ಲಿಗೆಬಳ್ಳಿಯೊಂದನ್ನು ನಮ್ಮನೆಯ ಅಂಗಳದಲ್ಲಿ ಬೆಳೆಸುತ್ತೇನೆ, ಆಗವನು ನನ್ನನ್ನು ಹುಡುಕಿಕೊಂಡು ನಮ್ಮನೆಯ ಅಂಗಳದಲ್ಲಿ ನಿಲ್ಲುತ್ತಾನಲ್ಲವಾ?

ಪ್ಯಾಕಿಂಗ್ ಮಾಡುತ್ತ ಪ್ರತಿ ಬಟ್ಟೆಯ ಮಡಿಕೆಯೊಳಗೂ ಅವನಿಗಾಗಿ ಒಂದೊಂದು ಕಂಬನಿಯನ್ನು ಮುತ್ತಂತೆ ಇಟ್ಟು ಬಟ್ಟೆ ಬರೆಗಳನ್ನ ಪ್ಯಾಕ್ ಮಾಡುತ್ತಲಿದ್ದೇನೆ. ಅವನಿಷ್ಟದ ಹಾಲಿನ ಬಣ್ಣದ ಗುಲಾಬಿ ಅಂಚಿನ ಸೀರೆಯೊಂದನ್ನು ಅವನಿಗಾಗಿ ಬಿಟ್ಟು ಹೋಗುತ್ತಿದ್ದೇನೆ. ಅವ ಕೊಡಿಸಿದ ತಂಪು ಬಣ್ಣದ ಟೀ ಶರ್ಟನ್ನೂ ಹಾಗೂ ಅವನದೊಂದು ನೀಲಿಯ ಶರ್ಟನ್ನು ಮರೆಯದೇ ಬ್ಯಾಗಲ್ಲಿ ಸೇರಿಸಿಕೊಂಡಿದ್ದೇನೆ.
ತುಂಬಿದ ಬ್ಯಾಗುಗಳೊಂದಿಗೆ ಖಾಲಿ ಖಾಲಿ ಭಾವಗಳನ್ನು ಹೊತ್ತು ನಡೆಯುತ್ತಿರುವ ನನ್ನನ್ನವನು ಹಿಂಬಾಲಿಸಿ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಾ...ನನ್ನ ನೆಲದೆಡೆಗೆ ಮುಖ ಮಾಡುತ್ತಿದ್ದೇನೆ.



[ ಹೋಗಿಬರುತ್ತೇನೆ. ತಿಂಗಳುಗಳ ಕಾಲ ನನ್ನ ಬ್ಲಾಗ್ ಮರಿಯನ್ನು ಅನಾಥವಾಗಿಸದೇ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ನಿಮ್ಮೆಲ್ಲರ ಮೇಲಿರಿಸಿ ಮರಳುತ್ತಿದ್ದೇನೆ.]

January 12, 2008

ಇಂದು ಬೆಳಗಿನಲಿ

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ...

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ.

ನಿಮ್ಮೆಲ್ಲರ ನೆನೆಯುತ್ತಾ ನನ್ನೀ ಬೆಳಗನ್ನು ಆರಂಭಿಸುತ್ತೇನೆ. ಎಲ್ಲೋ ಇದ್ದು, ಮತ್ತೆಲ್ಲೋ ಇದ್ದು, ಇಲ್ಲೇ ಇದ್ದು ಸ್ಪಂಧಿಸುವ ನಿಮ್ಮೆಲ್ಲರೊಂದಿಗೆ ಆರಂಭವಾಗುವ ಬೆಳಗು ಸುಂದರವೆನಿಸುತ್ತದೆ, ಆಹ್ಲಾದವೆನಿಸುತ್ತದೆ, ಕಂಬನಿ ತರುತ್ತದೆ. ಪ್ರೀತಿ ಉಕ್ಕಿಸುತ್ತದೆ, ಮತ್ತೆ ನಿಮ್ಮೆಲ್ಲರ ಬಗ್ಗೆ ಮತ್ತದೇ ಅಭಿಮಾನ ಮೂಡಿಸಿಬಿಡುತ್ತದೆ. ಮನ ತುಂಬಿ ಬಂದಾಗ ನಿಮ್ಮ ಮುಂದಿಟ್ಟು ಖಾಲಿ ಮಾಡಿಕೊಳಲೇ ಎನಿಸಿಬಿಡುತ್ತದೆ. ಕಂಡ, ಕಂಡಿರದ, ಅರಿಯದ, ಅರಿತ, ಪರಿಚಿತ, ಅಪರಿಚಿತ ಮುಖಗಳ ಚಿತ್ರಣ ಮುಂದೆ ಬರುತ್ತದೆ. ನನ್ನ ಭಾವನೆಗಳಿಗಿಷ್ಟು ತಿಳಿ ಹೇಳುವ ನೀವುಗಳು, ಅದೇ ಭಾವಗಳ ಜೊತೆ ಮಾತಾಡುವ ನೀವುಗಳು, ಮಾತನಾಡದೆಯೇ ಮನತುಂಬಿಕೊಳ್ಳುವ ನೀವುಗಳು, ಮೌನವಾಗಿ ಬಂದು ನನ್ನ ಮಾತುಗಳ ಕೇಳಿ ಮೌನವಾಗಿಯೇ ಹೊರಡುವ ನೀವುಗಳು ಒಬ್ಬೊಬ್ಬರಾಗಿ ಮನದ ಕಣ್ಣೊಳಗೆ ಹಾದು ಹೋಗುತ್ತಿರಿ. ಒಬ್ಬರು ನಿಧಾನಕ್ಕೆ ನಡೆದರೆ, ಇನ್ನೊಬ್ಬರು ಹಿತವಾದ ವೇಗದಿ, ಮಗದೊಬ್ಬರು ಭರ್ರನೆ ನಡೆದು ಮನ ಕಾಣಿಸದೇ ಬ್ಲರ್ ಆಗಿಬಿಡುತ್ತಾರೆ. ಮಗ ಬಂದು "ಇಲ್ಲೊಂಚೂರು ಟೇಪ್ ಹಾಕು" ಎನ್ನುತ್ತಾನೆ. ಟೇಪ್ ಹಾಕಿ ಹರಿದು ಹೋದವುಗಳ, ಒಡೆದು ಹೋದವುಗಳ ಕೂಡಿಸಿ ಬರುವಷ್ಟರಲ್ಲಿ ಯಾರೋ ಬಂದು ನಡೆದು ಬಿಟ್ಟಿರುತ್ತಾರೆ. ಆದರೂ ದುಗುಡದ ಕೊಡ ಹೊತ್ತವರ, ನಗೆ ಹೊನಲ ಕೆತ್ತಿದವರ, ಮಾತುಗಳ ಮುಚ್ಚಿಟ್ಟು ಮೌನವಾದವರ, ಮಾತುಗಳ ಬೆಳೆ ಬೆಳೆದವರ, ಮಾತುಗಳ ಧಾನ್ಯವನೊಂದಿಷ್ಟು ದಾನ ಮಾಡಿದವರ ಮುಖಗಳು ಹಾದು ಹೋಗುವ ಸರಣಿಯಲಿ ಸಾಲುಗಳ ಹಾಗೆ. ಇನ್ನೇನ ಹೇಳಲಿ ನಿಮ್ಮಗಳ ಬಗ್ಗೆ! ನನ್ನೀ ಓದುಗ ದೊರೆಗಳ ಬಗ್ಗೆ. ಸಂಕ್ರಾಂತಿಯ ಸಿಹಿಯಲ್ಲಿ, ಯುಗಾದಿಯ ಸಿಹಿ-ಬೇವಿನಲಿ, ಹುಣ್ಣಿಮೆಯ ಬೆಳದಿಂಗಳಿನೊಲು, ಅಮವಾಸ್ಯೆಯ ಕತ್ತಲೆಯಲಿ, ಮೇಣದ ಬತ್ತಿಯ ಮಂದದಲಿ, ಟಾರ್ಚ್ ನ ಶಾರ್ಪಿನಲಿ, ಹೀಗೆ...ಎಲ್ಲೆಲ್ಲೂ ಮುನ್ನಡೆಯಲು ಹಾದಿ ಮಾಡುವ ನಿಮ್ಮಗಳ ನಾ ಮರೆಯಲಿ ಹೇಗೆ?

ಆದರೂ ಒಂದಿಷ್ಟು ಹೇಳಬೇಕೆನ್ನುತ್ತಿದೆ ಮನ.

ನನ್ನೆಲ್ಲ ಓದುಗ ದೊರೆಗಳಿಗೂ, ನೀವೆಲ್ಲ ತೋರಿದ ಪ್ರೋತ್ಸಾಹಕ್ಕೂ, ಸಲಹೆಗಳಿಗೂ ನಾ ಆಭಾರಿ. "ಎಷ್ಟೆಲ್ಲ ಬರಿತ್ಯೆ ಮಾರಾಯ್ತಿ, ತಿಂಗಳಿಗೊಂದು ಪೋಸ್ಟ್ ಕೊಡು, ಓದಲು ಟೈಮ್ ಸಾಕಾಗ್ತಾ ಇಲ್ಲೆ" ಅಂತ ಸಲಹೆಯಿತ್ತು ನನ್ನ ಆಳಸಿತನಕ್ಕೆ ಸೊಪ್ಪು ಹಾಕಿದ ಪುಟ್ಟ ತಮ್ಮ ಸುಶ್ರುತನಿಗೂ, "ಎಲ್ಲ ಧರ್ಮಗಳ ಹಬ್ಬಕ್ಕೂ ಲೇಖನ ಕೊಟ್ಟು, ನಮಗೆಲ್ಲ ಅಜೀರ್ಣವಾಗುತ್ತಿದೆ"ಯೆಂದು ನೇರವಾಗಿ ನುಡಿದ mdಯವರಿಗೂ, "ಅನವಶ್ಯಕ ದೀರ್ಘ"ಗಳ ಬಗ್ಗೆ ನಗಿಸುತ್ತ ಸಲಹೆಯಿತ್ತ ಭಾಗವತರಿಗೂ, "ಎನ್ನೊಳಗ ದೀಪ" ಕವನದಲ್ಲಿ ತಪ್ಪಿದ ಕಾಗುಣಿತ ತಿದ್ದಿಸಿದ ಜ್ಯೋತಿ ಅಕ್ಕನಿಗೂ, "ಬೊಗಸೆಯೊಳಗಣ ಭಾವ" ಕವನದ ಸಾಲುಗಳ ತಿದ್ದಲು ಸಲಹೆಯಿತ್ತ proton ಅವರಿಗೂ, ಹೀಗೆಯೇ ಅದೆಷ್ಟೋ ಸಲಹೆಯಿತ್ತ ತಮ್ಮೆಲ್ಲರಿಗೂ ಇಂತದೇ ಇನ್ನಷ್ಟು ನೇರ ಸಲಹೆಗಳನ್ನು ಕೊಡಬೇಕಾಗಿ ಕೇಳಿಕೊಳ್ಳುವ ಜೊತೆ ಧನ್ಯವಾದಗಳನ್ನು ಹೇಳುತ್ತೇನೆ. "ನನ್ನ ಲೇಖನವೊಂದಕ್ಕೆ ನಿನ್ನ ಪಾತ್ರ ಬೇಕಾಗಿದೆ, ತೊಗೊಳ್ಲಾ?" ಎಂದಾಗ "no probs" ಎಂದು "ನಕ್ಕು ಬಿಡು ಒಮ್ಮೆ" ಕಥಾನಕಕೆ ಪಾತ್ರವಾದ ರವಿಗೂ ನನ್ನ ವಂದನೆಗಳು. ಇಷ್ಟೇ ಅಲ್ಲದೆ ಅದೆಷ್ಟೋ ಅನಿಸಿಕೆಗಳನ್ನು ತೆರೆದಿಟ್ಟು ಮನವನ್ನು ಇಲ್ಲೇ ಬಿಟ್ಟು ಹೋದ ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಅನಂತ ವಂದನೆಗಳು. ಅದೆಷ್ಟೋ ಓದುಗ ಮಿತ್ರರು ಅನಿಸಿಕೆ ಹೇಳದಿದ್ದರೂ ನಿಮ್ಮಗಳ ಮನ ಇಲ್ಲಿ ಓಡಾಡಿ ಅಳಿಸದೇ ಇರುವ ಭಾವದ ಛಾಪುಗಳನ್ನು ಹಿಟ್ ಕೌನ್ಟರ್ ಹಿಡಿದಿಟ್ಟುಕೊಂಡಿದೆ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

ನೀವುಗಳೆಲ್ಲ ನನ್ನ ಬ್ಲಾಗ್ ಗಳಲ್ಲಿ ಬರೆದಂತೆಯೇ ನನ್ನ ಬರವಣಿಗೆಗೆ ಸಂಬಂಧಿಸಿದ ಪತ್ರವೊಂದರ ಖುಷಿ ನಿಮ್ಮೆಲ್ಲರನು ಪುನಃ ಪುನಃ ನೆನಪಿಸುವುದಲ್ಲದೇ ಇದನ್ನು ತಮ್ಮೆಲ್ಲರೊಂದಿಗೆ ಈ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿದೆ. ತೇಜಸ್ವಿನಿ ಅವರ ಆ ಮೇಲ್ ಅನ್ನು ನೇರವಾಗಿ ಈ ಲೇಖನದ ನನ್ನೆಲ್ಲ ಓದುಗ ದೊರೆಗಳ ಮುಂದಿಡುತ್ತಿದ್ದೇನೆ.ಅಂತೆಯೇ ಪತ್ರ ಬರೆದ ತೇಜಸ್ವಿನಿಯವರಿಗೆ ನನ್ನ ಧನ್ಯವಾದಗಳು. ಹೊಸವರ್ಷದ ಈ ಹೊಸ ಪತ್ರ ಓದಿ ಯಾಕೋ ಕಣ್ಣಂಚು ಒದ್ದೆ. ಸಾವಿರ ಮೈಲುಗಳಾಚೆಯ ಸ್ನೇಹಕ್ಕೆ ಸೇತುವೆಯಾಗಬಲ್ಲವು ಈ ನನ್ನ ಸಾಲುಗಳು ಎಂಬುದಾಗಿ ಬರೆವಾಗ ನಾ ಯೋಚಿಸಿರಲಿಲ್ಲ.
ಈ ಮುಂದಿನ ಸಾಲುಗಳು ಲೇಖಕಿ ತೇಜಸ್ವಿನಿಯವರು ಬರೆದ ಸಾಲುಗಳು.




ನಿಮ್ಮೆಲ್ಲರ ಹೇಳಿಕೆಗಳಿಗೆ ನಾ ಎಷ್ಟು ಪಾತ್ರಳೋ ಗೊತ್ತಿಲ್ಲ. ಮನಕೆ ತೋಚಿದ್ದನ್ನ ಗೀಚಿಬಿಡುವ ನನ್ನ ಬರವಣಿಗೆಗಳಲ್ಲಿ ತಿರುಳೆಷ್ಟಿದೆಯೋ ಕಾಣೆ. ಇಲ್ಲಿನ ತಪ್ಪುಗಳ ಎಣಿಸಿ ಲೆಕ್ಕವಿಡುವ ಕರಣಿಕನು ಯಾರೋ! ಇಂತಿದ್ದರೂ ಪ್ರೋತ್ಸಾಹಿಸುವ ನಿಮಗೆಲ್ಲ ನಾ ಚಿರಋಣಿ.



ಸಿಂಧು ಅವರಿಗೆ, ನನ್ನಮ್ಮನಿಗೆ, ನನಗೆ ಹಾಗೂ ನಿಮ್ಮಲ್ಲರಿಗೆ ಇಷ್ಟವಾದ ಈ ಸಾಲುಗಳನ್ನು ಮಾತ್ರ ನಿಮ್ಮೆಲ್ಲರಿಗಾಗಿ ಹೇಳಬಲ್ಲೆ, ಅದೆಂದರೆ ಕೆ.ಎಸ್.ಎನ್ ಅವರು ಬರೆದ
"ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ಮತ್ತೊಮ್ಮೆ ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ,

ಈ ಹಿಂದಿನ ಪ್ರೋತ್ಸಾಹವ ಮುಂದೆಯೂ ತಮ್ಮೆಲ್ಲರಲಿ ಕೇಳಿಕೊಳ್ಳುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳುತ್ತಾ, ಬ್ಲಾಗೆಂಬ ಬೊಗಸೆಯೊಳಗೆ ನೀವಿತ್ತ ಪ್ರೋತ್ಸಾಹ-ಪ್ರೀತಿಗಳ ಮನದಲ್ಲಿ ತುಂಬಿಟ್ಟುಕೊಳ್ಳುತ್ತಾ, ತಮ್ಮೆಲ್ಲರ ಪ್ರೋತ್ಸಾಹದ ಭಿಕ್ಷೆಗಾಗಿ ಸದಾ "ಭಿಕ್ಷಾಂದೇಹಿ" ಎನ್ನುವ ನಿಮ್ಮೆಲ್ಲರ
-ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.