ಅದೊಂದು ಚಂದದ ಗಳಿಗೆ. ಆ ಸುಸಂದರ್ಭವೆಂದರೆ ಶ್ರೀ ಜಿ. ಜಿ.ಹೆಗಡೆ, ಕೋಡಗದ್ದೆ ಇವರ ಪರಿಚಯವಾಯ್ತು. ಮಾತಿನ ಮಧ್ಯೆ ಜಿ.ಜಿ.ಹೆಗಡೆಯವರು ಹೇಳಿದರು ‘ಆನೂ ಒಂದು ಪುಸ್ತಕ ಬರಕಂಜಿ’ (ನಾನೊಂದು ಪುಸ್ತಕ ಬರೆದಿಟ್ಟುಕೊಂಡಿದ್ದೇನೆ) . ಆ ಸರಳತೆಯೊಳಗೆ ಕಳೆದುಹೋದೆ.
‘ಇಲ್ಲಿ ಟೈಂ ಪಾಸ್ ಆಗುವುದು ಕಷ್ಟ’ ಎಂದರು. ‘ನನ್ನಲ್ಲಿ ಕೆಲವು ಪುಸ್ತಕಗಳಿವೆ, ಅವೆಲ್ಲ ಬಹುಷಃ ನೀವು ಓದಿದವುಗಳೇ ಆಗಿರಲಿಕ್ಕೆ ಸಾಕು’ ಅಂದೆ. ಇಲ್ಲ, ನಾಲ್ಕಾರು ವರ್ಷಗಳಿಂದೀಚೆಗೆ ಬಂದ ಪುಸ್ತಕಗಳನ್ನ ಓದಲಾಗಿರಲಿಲ್ಲ’ ಎಂದರು. ಮಾತು ಹೀಗೆಯೇ ಅರಳಿಕೊಳ್ಳುತ್ತ ವಸುಧೇಂದ್ರರ ತನಕ ಬಂದು ನಿಂತಿತು.
ಈ ಸಲ ಭಾರತಕ್ಕೆ ಬಂದಾಗ ಸಂದೀಪ ಗಿಫ್ಟಿಸಿದ್ದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುಧೇಂದ್ರರ ಲಲಿತ ಪ್ರಬಂಧಗಳ ನೆನಪಾಯ್ತು. ಆ ಪುಸ್ತಕವನ್ನ ಉಡುಗೊರೆ ಕೊಡುವ ಮುನ್ನ ಸಂದೀಪ ಕೇಳಿದ್ದ ‘ನೀ ವಸುಧೇಂದ್ರ ಅವರನ್ನ ಓದಿದ್ಯಾ?’
‘ಇಲ್ಲೆ, ಹಂಗಂದ್ರೆ ಯಾರು?’ ಅಂತ ಕೇಳಿದ್ದೆ ಯಾವತ್ತಿನದೇ ಪೆದ್ದುತನದಲ್ಲಿ.
‘ಇದನ್ನ ಓದು, ಚೊಲೊ ಇದ್ದು’ ಅಂತ ಕೊಟ್ಟ। ಮುಖಪುಟ ಎಲ್ಲೋ ನೋಡಿದೀನಿ ಅನ್ನಿಸ್ತು। ತಕ್ಷಣ ನೆನಪಿಗೆ ಬಂತು ‘ನನ್ನ ಬ್ಲಾಗ್ ಪ್ರೊಫೈಲ್ ಫೋಟೋ ಇದೇ ಥರಹವೇ ಇದೆ’ ಅಂತ। ಆ ಪುಸ್ತಕದ ಮುಖಪುಟದಲ್ಲಿ ಅಮ್ಮನ ಕೈ ಮತ್ತು ಪಾಪುನ ಕಾಲು ಇತ್ತು। ನನ್ನ ಬ್ಲಾಗ್ ಪ್ರೊಫೈಲ್ ಅಲ್ಲಿರೋ ಫೊಟೋ ಅಲ್ಲಿ ಪಾಪುನ ಕಾಲು ಮಾತ್ರ ಇದೆ। ಕಣ್ಣಗಲಿಸಿ, ಹಲ್ಕಿರಿದು ‘ಎಷ್ಟ್ ಚೊಲೋ ಇದ್ದಲಾ....’ ಅಂದೆ। ಅದ್ಕೇ ಕೊಟ್ಟಿದ್ದು ಅಂದ। ಸಂದೀಪನಿಗೆ ಥ್ಯಾಂಕ್ಸ್ ಹೇಳಿದ್ನೋ ಬಿಟ್ನೋ ಮರ್ತಿದೀನಿ। ಆ ಪುಸ್ತಕವನ್ನ ಓದಿಯಾದ್ಮೇಲೆ ಸಂದೀಪನಿಗೆ ಥ್ಯಾಂಕ್ಸ್ ಹೇಳಲೇಬೇಕು ಎನ್ನಿಸಿತ್ತು.
ಆವತ್ತು ಸಂಜೆ ಗಾಂಧೀಬಾಜಾರ್ ಅಲ್ಲಿ ‘ಅಂಕಿತ’ ಹೊಕ್ಕಿದ್ದಾಗ ‘ಯುಗಾದಿ’ ‘ಚೇಳು’ ಎಲ್ಲ ತಗೊಂಡು ಮರುದಿನ ಯುಗಾದಿ ಹಬ್ಬ ಇದೆ ಅಂತ ಊರಿಗೆ ಬಂದಿದ್ದೆಲ್ಲ ನೆನಪಾಗಿ ‘ಮಾವಾ...ನನ್ ಹತ್ರ ಯುಗಾದಿ, ಚೇಳು ಎಲ್ಲ ಇದ್ದು, ನಿಮಗೆ ಕೊಡ್ತಿ ನಾನು’ ಅಂದೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ ನಂಗೂ ತುಂಬಾ ಇಷ್ಟ, ನೀವು ಓದಿ ನೋಡಿ ನಿಮಗೂ ಇಷ್ಟ ಆಗ್ತು’ ಅಂದಿದ್ದೆ.
ಇವತ್ತು ಮತ್ತೆ ಅವರನ್ನ ಭೇಟಿಯಾಗಿದ್ದೆ। ‘ವಿಚಿತ್ರಾನ್ನ’ ಪುಸ್ತಕದ ಹಾಳೆ ತಿರುವುತ್ತ ‘ವಿಜಯ ಕರ್ನಾಟಕದಲ್ಲಿ ಜೋಶಿಯವರ ಅಂಕಣ ಓದ್ತಿ ನಾನು’ ಅಂದ್ರು. ‘ಇವತ್ತು ಸಾಹಿತ್ಯದ ಬಗ್ಗೆ ಮಾತಾಡುತ್ತಿದ್ದರೆ ಕೇಳಲು ಪುರುಸೊತ್ತು ಸಿಗದಿರುವಂಥಹ ವೃತ್ತಿಯಲ್ಲಿದ್ದೂ ಇವರೆಲ್ಲ ಪುಸ್ತಕ ಬರೆದು ಸಾಧಿಸಿದ್ದಾರಲ್ಲ’ ಅಂತ ಖುಷಿಪಟ್ಟರು ಜಿ.ಜಿ.ಹೆಗಡೆಯವರು. ನಿಜ, ಆಸಕ್ತಿಯಿರುವಲ್ಲಿ ಸಮಯ ತಾನಾಗೇ ಹೊಂದಿಕೊಳ್ಳುತ್ತದೆ ಎನ್ನಿಸಿತು. ‘ಯಾವುದೇ ವಿಷಯದ ಬಗ್ಗೆ ಒಲವು, ಆಸಕ್ತಿ ಇದ್ರಷ್ಟೇ ಇವೆಲ್ಲ ಸಾಧ್ಯ’ ಅಂತ ಹೇಳಿದ ಜಿ.ಜಿ.ಹೆಗಡೆಯವರ ಮಾತು ಅದೆಷ್ಟು ಸತ್ಯ ಎನ್ನಿಸಿತು.
‘ಮಂಕುತಿಂಮನ ಕಗ್ಗ’ ಗಳಲ್ಲೊಂದಿಷ್ಟನ್ನು ತಮ್ಮ ಕೈಯ್ಯಾರೆ ಟೈಪಿಸಿ, ಪ್ರಿಂಟ್ ಔಟ್ ತೆಗೆದುಕೊಟ್ಟರು. ಅತ್ತೆ(ಜಿ।ಜಿ।ಹೆಗಡೆಯವರ ಪತ್ನಿ) ಯವರು ಕೊಟ್ಟ ರುಚಿಯಾದ ಖೀರನ್ನು ನಾನು ಸವಿಯುತ್ತಲಿದ್ದರೆ ಮಾವ(ಜಿ.ಜಿ.ಹೆಗಡೆಯವರು) ರಾಗವಾಗಿ ಕಗ್ಗವನ್ನು ಹೇಗೆ ಹಾಡಿಕೊಂಡರೆ ನಾಲಿಗೆಯಲ್ಲಿಯೇ ಉಳಿದೀತು ಅಂತ ತೋರಿಸುತ್ತಿದ್ದರೆ ನನ್ನ ನಾಲಿಗೆಯಲ್ಲಿದ್ದ ರುಚಿ ಖೀರಿನದೋ ಅಥವಾ ಕಗ್ಗದ್ದೋ ಗೊತ್ತಾಗಲಿಲ್ಲ.
ಬರುವಾಗ ಜಿ.ಜಿ.ಹೆಗಡೆಯವರು ತಮ್ಮ ಕವನ ಸಂಕಲನದ ಪ್ರತಿಯೊಂದನ್ನು ಕೈಗಿತ್ತರು. ಮತ್ತೆ ಯಾವತ್ತಿನಂಗೆ ಕಣ್ಣಗಲಿಸಿ ಹಲ್ಕಿರಿದು ‘ಥ್ಯಾಂಕ್ ಯೂ’ ಅಂದೆ. ‘ಆವರಣ’ ಹಾಗೂ ‘ಜಯಂತ ಕಾಯ್ಕಿಣಿ ಕಥೆಗಳು’ ಇವೆರಡನ್ನು ಅವರಿಗೆ ಓದುವುದಕ್ಕೋಸಕರ ಕೊಟ್ಟು, ಎಲ್ಲರಿಗೂ ಟಾಟಾ ಹೇಳಿ ಅವರ ಮನೆಯಿಂದ ಹೊರಟಿದ್ದೆ. ದಾರಿಯಲ್ಲಿಯೇ ಅವರ ಕವನ ಸಂಕಲನ ತೆರೆದು ಓದಲಾರಂಭಿಸಿದ್ದೆ. ಸ್ಟ್ರೀಟ್ ಲೈಟ್ ಎದುರುಬಂದಾಗೆಲ್ಲ ಸರಸರನೆ ಓದಿಕೊಂಡು ಕತ್ತಲು ಬೆಳಕಿನಾಟದಲ್ಲಿ ಎರಡು ಕವನ ಓದುವಷ್ಟರಲ್ಲಿ ಮನೆ ತಲುಪಿದ್ದೆವು. ನನ್ನವನು ‘ಮನೆ ಬಂತು, ಇಳಿ ’ ಅಂದ. ‘ಇವತ್ತು ಈ ಕವನ ಪುಸ್ತಕ ನಂಗೆ ಕೊಡು, ನಾನು ಬೇಗ ಓದಿ ಮುಗ್ಸಿ ನಾಳೆ ನಿಂಗೆ ಕೊಡ್ತಿ’ ಅಂದವನ ಮಾತಿಗೆ ದುರುಗುಟ್ಟಿ ಅವನ ನೋಡಿದ್ದೇ ಉತ್ತರ. ‘ನೀನಿವತ್ತು ಇದನ್ನ ಓದು’ ಅಂತ ಬೇರೊಂದು ಚಂದದ ಪುಸ್ತಕವನ್ನ ಅವನಿಗೆ ಹಿಡಿಸಿ ಇಲ್ಲಿ ಬಂದು ಒಬ್ಬಳೇ ಕುಳಿತು ಜಿ.ಜಿ.ಹೆಗಡೆಯವರ ಚಂದದ ಕವನಗಳನ್ನ ಓದ್ತಾ ಇದ್ರೆ ಯಾಕೋ ಅವುಗಳನ್ನ ನಾನೊಬ್ಬಳೆ ಓದೋಕೆ ಮನಸಾಗ್ಲಿಲ್ಲ. ಒಂದು ಕವನವನ್ನು ನೀವುಗಳೂ ನನ್ನೊಡನೆ ಓದಿ ಸವಿಯಲಿ ಎನ್ನಿಸಿತು. ಕವನ ಸಂಕಲನದ ಶೀರ್ಷಿಕೆ ಏನಂತ ಕೇಳಿದ್ರಾ? ಒಡಂಬಡಿಕೆ . ಅದರೊಳಿಗಿಂದ ಈ ಒಂದು ಕವನ ನಿಮ್ಮೆಲ್ಲರಿಗಾಗಿ.
ಸಮರಸ
ಎಲ್ಲರಂತೆಯೆ ನೀನಿರು ಎಲ್ಲರೊಳಗೊಂದಾಗಿರು
ಬಲ್ಲೆನೆಲ್ಲವನೆಂಬ ಗರ್ವದ ಗುಲ್ಲುಸಲ್ಲದು ನಿಷ್ಠುರ
ನಿನ್ನ ಭಿನ್ನತೆ ಇನ್ನು ಅಧಿಕತೆ
ಭೇದ ಮೆರೆಸುವುದೇತಕೆ?
ಸುಖದ ಆಶಯ ಕೀರ್ತಿ ಹಂಬಲ
ಸಿರಿಪದದ ಪಟ್ಟಕೆ ಕಾತರ
ಪ್ರೀತಿಯಪ್ಪುಗೆ ಪ್ರೇಮ ವರ್ಷಕೆ
ಮಮತೆ ಹೃದಯದ ವಿಕಸನ
ಒಲವು ಹಲಬಗೆ ಚಲವು ತಿಳಿದೊಡೆ
ಗೆಲವು ಲೋಕಕೆ ಸಂಭ್ರಮ
ಮುಗಿಲಗಣ್ಣಿನ ಧಾರೆ ಧುಮುಕದೆ
ನೆಲದ ಎದೆಗುದಿ ಸ್ಪಂದನ
ಹರಿವ ನದಿ ತೊರೆ ತೆರದಿ ಬದುಕಿನ
ಜೀವವಾಹಿನಿ ಧಾವನ
ಹುಟ್ಟುಸಾವಿನ ಸತ್ಯ ಶೋಧನೆ
ಮುಟ್ಟು ಕೊನೆ ಪರ್ಯಂತರ
ಉಗಮಕೆಡೆಯದೊ ಪೂರ್ವದಾರ್ಜಿತ
ಜಗವೆ ಚೇತನ ನಿಗಮವು
*****************************
ಓದುತ್ತ ಕುವೆಂಪು ನೆನಪಾಗುತ್ತಿದ್ದಾರೆ। ನಿಜ, ಕೋಡಗದ್ದೆ ಶಿವಮೊಗ್ಗೆಯಿಂದೇನೂ ದೂರವೇನಿಲ್ಲ.